ವಿಜಯನಗರ, ಮೇ 30; ಕೋವಿಡ್ ಸೋಂಕಿಗೆ ಅಕ್ಕ ಮತ್ತು ತಮ್ಮ ಬಲಿಯಾದ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಚಿಕಿತ್ಸೆ ಫಲಕಾರಿಯಾಗದೇ ಒಂದೇ ದಿನದ ಅಂತರದಲ್ಲಿ ಇಬ್ಬರೂ ಸಹ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯ ಕ್ಯಾರೋಲಿನ್ ಲೂಸಿಯಾ ಸ್ಮಿತ್ (45) ಹಾಗೂ ಸಾವಿಯೋ ಸ್ಮಿತ್ (42) ಎಂದು ಗುರುತಿಸಲಾಗಿದೆ. ಕೋವಿಡ್ ಸೋಂಕು ತಗುಲಿದ ಬಳಿಕ 8 ದಿನಗಳಿಂದ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಾಂಗ್ರೆಸ್ನ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಮೇ 27 ರಂದು ಮೃತಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು ಮತ್ತು ಹೊಸಪೇಟೆಯ ಜನನಿ ಮಹಿಳಾ ಸಬಲೀಕರಣ ಸಂಘಟನೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು.
ಸಾವಿಯೋ ಸ್ಮಿತ್ ಮೇ 28 ರಂದು ಮೃತಪಟ್ಟಿದ್ದರೆ. ಹೊಸಪೇಟೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕೋವಿಡ್ ಸಮೀಕ್ಷೆ ಕಾರ್ಯದಲ್ಲಿ ಸ್ವಯಂ ಸೇವಕಿಯಾಗಿ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಕಾರ್ಯ ನಿರ್ವಹಿಸಿದ್ದರು.
ಕರ್ನಾಟಕದಲ್ಲಿ ಕೋವಿಡ್ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಬಳ್ಳಾರಿಯೂ ಒಂದು. ಶನಿವಾರದ ವರದಿಯಂತೆ ಬಳ್ಳಾರಿಯಲ್ಲಿ 671 ಹೊಸ ಪ್ರಕರಣ ದಾಖಲಾಗಿದೆ. 1803 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಚಿಕಿತ್ಸೆ ಫಲಿಸದೇ 14 ಜನರು ಮೃತಪಟ್ಟಿದ್ದಾರೆ.
ಸಂಪೂರ್ಣ ಲಾಕ್ಡೌನ್ ಕೋವಿಡ್ ನಿಯಂತ್ರಣಕ್ಕಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈಗಾಗಲೇ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಮೇ 31ರ ಬೆಳಗ್ಗೆ 6ರಿಂದ ಜೂ.7ರ ಬೆಳಗ್ಗೆ 6ರ ತನಕ ಲಾಕ್ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.