ಬೆಂಗಳೂರು, ಮೇ 25: ಇತ್ತೀಚೆಗೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ತೀವ್ರ ಮುಜುಗರಕ್ಕೆ ಒಳಗಾದರಾ?
ಹೌದು ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಮೇಲೆ ಜಮೀರ್ ಅಹ್ಮದ್ ತೋರುತ್ತಿರುವ ಅತಿಯಾದ ಪ್ರೀತಿ, ವಿಶ್ವಾಸವೇ ಕಾರಣ.
ಒಂದು ವೇಳೆ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆಯನ್ನು ಆರಂಭಿಸಿದ್ದೇ ಜಮೀರ್ ಅಹ್ಮದ್ ಖಾನ್ ಎಂದರೆ ತಪ್ಪಾಗಲಾರದು. ಆಗಲೇ, ಒಮ್ಮೆ ಹೈಕಮಾಂಡ್ ಇವರಿಗೆ ಬಹಿರಂಗವಾಗಿ ಮಾತನಾಡದಂತೆ ಸೂಚಿಸಿತ್ತು.
ಕೊರೊನಾ ಸಂಕಷ್ಟದ ಸಮಯದಲ್ಲಿ ನೀವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಯಾವರೀತಿ ಕೆಲಸ ನಿರ್ವಹಿಸುತ್ತಿದ್ದೀರಾ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳಲು ಸುರ್ಜೇವಾಲ ಸಭೆಯನ್ನು ಕರೆದಿದ್ದರು
ನಮ್ಮ ನಾಯಕ ಸಿದ್ದರಾಮಯ್ಯ, ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕು
![](https://assets-news-bcdn.dailyhunt.in/cmd/resize/400x400_80/fetchdata16/images/71/60/2b/71602b89227def805fba9cdaac1209a54d7e9724966734940a09aaa67bb40c1b.jpg)
ನಮ್ಮ ನಾಯಕ ಸಿದ್ದರಾಮಯ್ಯ, ಅವರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಜಮೀರ್ ಅಹ್ಮದ್ ಪದೇಪದೇ ಹೇಳುತ್ತಿದ್ದರು. ಇದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಬಣದ ಕೋಪಕ್ಕೆ ಕಾರಣವಾಗಿತ್ತು. ಸಿಎಂ ಯಾರಾಗಬೇಕು ಎನ್ನುವುದನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಡಿಕೆಶಿ ಆ ಸಂದರ್ಭದಲ್ಲಿ ಹೇಳಿದ್ದರು.
ಕೋಲಾರ ಮತ್ತು ಬಸವನಗುಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ
![](https://assets-news-bcdn.dailyhunt.in/cmd/resize/400x400_80/fetchdata16/images/9d/87/a8/9d87a8385da164837e13c2468cf97afa6a2b24576d24856e9e4aa300d8d8c536.jpg)
ಪಕ್ಷದ ಶಾಸಕರು/ಕಾರ್ಯಕರ್ತರು ಕೊರೊನಾ ಹಾವಳಿಯ ಸಂದರ್ಭದಲ್ಲಿ ಬಡವರಿಗೆ ಉಪಯೋಗವಾಗುವಂತಹ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಕರೆಯುತ್ತಿದ್ದಾರೆ. ಇತ್ತೀಚೆಗೆ ಕೋಲಾರ ಮತ್ತು ಬಸವನಗುಡಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ಜಮೀರ್ ಅವರು ಸುರ್ಜೇವಾಲಾಗೆ ವಿವರಿಸಿದ್ದಾರೆ
![](https://assets-news-bcdn.dailyhunt.in/cmd/resize/400x400_80/fetchdata16/images/a4/63/e1/a463e109b1fa710dec53b65f51a12523a1020449d4616c8c6e67480d18e0a18c.jpg)
ಆದರೆ, ಚಾಮರಾಜಪೇಟೆಯಲ್ಲಿ ನಡೆದ ಕೋವಿಡ್ ಆಸ್ಪತ್ರೆಯ ಉದ್ಘಾಟನೆಯ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಮಾತ್ರ ಜಮೀರ್ ಆಹ್ವಾನಿಸಿದ್ದರು. ಇದು ಕೆಪಿಸಿಸಿ ಅಧ್ಯಕ್ಷರ ಬೇಸರಕ್ಕೂ ಕಾರಣವಾಗಿತ್ತು. ತನ್ನ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸಗಳನ್ನು ಜಮೀರ್ ಸಭೆಯಲ್ಲಿ ಸುರ್ಜೇವಾಲಾಗೆ ವಿವರಿಸಿದ್ದಾರೆ.
ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎನ್ನುವ ಬುದ್ದಿಮಾತು
![](https://assets-news-bcdn.dailyhunt.in/cmd/resize/400x400_80/fetchdata16/images/59/5c/82/595c8230e48af884f18eefea48b9c7ff8f574027a200770cead442b3e50fd811.jpg)
ಚಾಮರಾಜಪೇಟೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ವಿವಿಧ ಜನಪರ ಕೆಲಸವನ್ನು ಆಯೋಜಿಸಿದ್ದೇನೆ ಎಂದು ಜಮೀರ್ ಪದೇಪದೇ ಸಿದ್ದರಾಮಯ್ಯನವರ ಹೆಸರನ್ನು ಸಭೆಯಲ್ಲಿ ಉಲ್ಲೇಖಿಸಿದ್ದರು. ಆಗ, ಕೆಪಿಸಿಸಿ ಅಧ್ಯಕ್ಷರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎನ್ನುವ ಬುದ್ದಿಮಾತನ್ನು ಸುರ್ಜೇವಾಲ ನೀಡಿದ್ದಾರೆ ಎನ್ನುವ ಮಾಹಿತಿಯಿದೆ.