ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಬಹುತೇಕ ಸಿಸಿಟಿವಿಗಳು ಕಾರ್ಯನಿರ್ವಹಿಸದಿರುವುದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ನೂತನ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆಂದು ತಿಳಿದುಬಂದಿದೆ.
ವಿಧಾನಪರಿಷತ್ ಕಾರ್ಯದರ್ಶಿಗಳಿಗೆ ಈ ಕುರಿತು ಪತ್ರ ಬರೆದಿರುವ ಹೊರಟ್ಟಿಯವರು, ಸಚಿವಾಲಯದಲ್ಲಿ ಅಳವಡಿಸಲಾಗಿರುವ ಹಲವು ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವುಗಳನ್ನು ಉದ್ದೇಶಪೂರ್ವಕವಾಗಿ ಕೆಲವರು ಹಾಳು ಮಾಡುತ್ತಿರುವ ದೂರುಗಳು ಬರುತ್ತಿವೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆಂದು ತಿಳಿದುಬಂದಿದೆ.
ವಿಧಾನಪರಿಷತ್ ಕಟ್ಟಡದಲ್ಲಿ ಒಟ್ಟಾರೆ 36 ಸಿಸಿಟಿವಿಗಳಿವೆ. ಆದರೆ, ಇದರಲ್ಲಿ ಬಹುತೇಕ ಸಿಸಿಟಿವಿಗಳು ಕಾರ್ಯನಿರ್ವಹಿಸುತ್ತಿಲ್ಲ. ವಾರ್ಷಿಕ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಮಾಡಲಾಗುತ್ತಿಲ್ಲ. ನೀವು ಕಾರ್ಯದರ್ಶಿಯಂತಹ ಉನ್ನತ ಹುದ್ದೆಯಲ್ಲಿರುವುದರಿಂದ ಯಾವುದೇ ಮುಲಾಜಿಲ್ಲದೆ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ಆಡಳಿತವನ್ನು ಚುರುಕುಗೊಳಿಸಬೇಕು. ಟಿಪ್ಪಣಿಯಲ್ಲಿ ಸೂಚಿಸಿರುವ ಎಲ್ಲ ಅಂಶಗಳನ್ನು ಜಾರಿಗೊಳಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಂಡು ಕಾರ್ಯರೂಪಕ್ಕೆ ತರಬೇಕು ಎಂದು ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ.
ಇದಲ್ಲದೆ, ಪರಿಷತ್ತಿನಲ್ಲಿ ಇಲಿಗಳ ಕಾಟ ಕೂಡ ಇದ್ದು, ಕೇಬಲ್ ಹಾಗೂ ವೈಯರ್ ಗಳನ್ನು ಹಾಳು ಮಾಡುತ್ತಿವೆ. ಪರಿಷತ್ತಿನಲ್ಲಿ 300 ಮಂದಿ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಬಹುತೇಕ ಜನರು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಕೆಲವರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಶಿಸ್ತು ಪಾಲನೆ ಮಾಡಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕಿದೆ.
ಡಿ-ಗ್ರೂಪ್ ನೌಕರರು ಸಮವಸ್ತ್ರಗಳನ್ನು ಧರಿಸಬೇಕು. ಆದರೆ, ಸಾಮಾನ್ಯ ಧಿರಿಸಿನಲ್ಲಿ ಬರುತ್ತಿರುವುದು ಗಮನಕ್ಕೆ ಬಂದಿದೆ. ನೌಕರರಿಗೆ ಪ್ರತೀ ತಿಂಗಳೂ ಸಮವಸ್ತ್ರಕ್ಕೂ ಹೆಚ್ಚಿವರು ಹಣವನ್ನು ನೀಡಲಾಗುತ್ತಿದೆ. ಮಾರ್ಚ್ ಮೊದಲ ವಾರದಿಂದ ಅಧಿವೇಶನ ನಡೆಯಲಿದ್ದು, ಅಷ್ಟರೊಳಗಾಗಿ ಸಿಸಿಟಿವಿ, ಬಯೋಮೆಟ್ರಿಕ್ ಹಾಜರಾತಿ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪತ್ರದಲ್ಲಿ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಹೊರಟ್ಟಿಯವರ ಪತ್ರ ಹಿನ್ನೆಲೆಯಲ್ಲಿ ಕಟ್ಟುನಿಟ್ಟನ ಕ್ರಮಕ್ಕೆ ಮುಂದಾಗಿರುವ ವಿಧಾನಪರಿಷತ್ ಕಾರ್ಯದರ್ಶಿಗಳು ಇದೀಗ ಕಾರಿಡಾರ್ ಗಳಲ್ಲಿ ನೌಕರರು ಮೊಬೈಲ್ ಫೋನ್ ಗಳನ್ನು ಬಳಕೆ ಮಾಡುವುದನ್ನು ನಿಷೇಧಿಸಿದ್ದಾರೆ. ಅಲ್ಲದೆ, ಡಿ ಗ್ರೂಪ್ ನೌಕರರು ಮಾರ್ಚ್ 1 ರಿಂದ ಸಮವಸ್ತ್ರ ಧರಿಸುವುದನ್ನು ಕಡ್ಡಾಯ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.