ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಆರೋಪ ಹೊತ್ತು, ಕಳೆದ ಸುಮಾರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಾಜಿ ಮೇಯರ್ ಸಂಪತ್ ರಾಜ್ ಕೊನೆಗೂ ನಿನ್ನೆ ಅರೆಸ್ಟ್ ಆಗಿದ್ದಾರೆ.
ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸಣ್ಣ ಸುಳಿವು ಸಿಗದೆ ಸಂಪತ್ ರಾಜ್ ಕಣ್ಮರೆಯಾಗಿದ್ದರು. ಅವರನ್ನ ಹುಡುಕಲು ಪೊಲೀಸರು ಒಂದು ತಿಂಗಳಿನಿಂದ ಪ್ರಯತ್ನಿಸಿದ್ದರು. ಸಂಪತ್ ರಾಜ್ರನ್ನ ಹಿಡಿಯೋದಿರಲಿ, ಅವರ ಸುಳಿವು ಪತ್ತೆ ಮಾಡೋದ್ರಲ್ಲೇ ಹೈರಾಣಾಗಿದ್ದರು. ನಾಗರಹೊಳೆ, ತಮಿಳುನಾಡು, ಗೋವಾ, ಬೆಂಗಳೂರು ಅಂತಾ ಸಿಸಿಬಿ ಅಧಿಕಾರಿಗಳು ಹಲವೆಡೆ ಸುತ್ತಾಡಿದ್ದರು. ಪೊಲೀಸರು ಬರುವ ಮಾಹಿತಿ ಅರಿತು ಪದೇ ಪದೇ ಸಂಪತ್ ಸ್ಥಳ ಬದಲಾಯಿಸ್ತಿದ್ದರು. ಪೊಲೀಸರು ಲೋಕೇಷನ್ ರೀಚ್ ಅಗುವಷ್ಟರಲ್ಲಿ ಜಾಗ ಖಾಲಿ ಮಾಡ್ತಿದ್ದರು ಎನ್ನಲಾಗಿದೆ.
ಸಂಪತ್ ರಾಜ್ರನ್ನ ಪತ್ತೆ ಮಾಡದಿದ್ದಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಹಾಗೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಅಸಹನೆ ಹೊರ ಹಾಕಿದ್ರು. ಈ ಮಧ್ಯೆ ನಿನ್ನೆ, ಸಂಪತ್ ರಾಜ್ ತಲೆಮರೆಸಿಕೊಳ್ಳೋದಕ್ಕೆ ಸಹಾಯ ಮಾಡಿದ ಆರೋಪದ ಮೇಲೆ ರಿಯಾಜುದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈತನಿಂದ ಸಂಪೂರ್ಣ ಮಾಹಿತಿ ಪಡೆದ ಬಳಿಕ, ಬೆಂಗಳೂರಿನಲ್ಲೆ ಸಂಪತ್ ರಾಜ್ರನ್ನ ಅರೆಸ್ಟ್ ಮಾಡಿದ್ದಾರೆ.
ಸ್ನೇಹಿತನ ಮನೆಗೆ ಬಂದಾಗ ಅರೆಸ್ಟ್
ಫೇಜರ್ ಟೌನ್ನಲ್ಲಿರುವ ಸ್ನೇಹಿತನ ಮನೆಗೆ ಬಂದಿದ್ದ ವೇಳೆ ಸಂಪತ್ರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾಪತ್ತೆಯಾಗಿದ್ದ ಅಷ್ಟೂ ದಿನ ಜಾಗಗಳನ್ನ ಬದಲಾಯಿಸುತ್ತಿದ್ದ ಸಂಪತ್, ಒಂದು ಜಾಗದಲ್ಲಿ ಎರಡು ದಿನದ ಮೇಲೆ ಇರುತ್ತಿರಲಿಲ್ಲ ಎನ್ನಲಾಗಿದೆ. ತಮಿಳುನಾಡು,ಕೇರಳ ಹಾಗೂ ಕರ್ನಾಟಕದ ವಿವಿಧೆಡೆ ಓಡಾಡಿದ್ದ ಸಂಪತ್, ನಿನ್ನೆ ಸ್ನೇಹಿತನ ಮನೆಗೆ ಬಂದಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.