ದೆಹಲಿ: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಗುರುವಾರ ಮೋದಿ ಸಂಪುಟ ತ್ಯಜಿಸಿದ್ದಾರೆ.
ಕೇಂದ್ರದ ರೈತ ವಿರೋಧಿ ಕ್ರಮವನ್ನು ವಿರೋಧಿಸಿ ಸಚಿವೆ ಹರ್ಸಿಮ್ರತ್ ಕೌರ್ ಸಂಪುಟವನ್ನು ತೊರೆಯುವುದಾಗಿ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಲೋಕಸಭೆಯಲ್ಲಿ ಘೋಷಿಸಿದ ಬೆನ್ನಲ್ಲೇ ಹರ್ಸಿಮ್ರತ್ ಕೌರ್ ತಮ್ಮ ರಾಜೀನಾಮೆಯನ್ನು ಮೋದಿ ಅವರಿಗೆ ಸಲ್ಲಿಸಿದ್ದಾರೆ.
ಪಕ್ಷದ ವಕ್ತಾರ ಹರ್ಚರಣ್ ಬೈನ್ಸ್ ಅವರು ಈ ವಿಚಾರವನ್ನೂ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರವು ಸಂಸತ್ತಿನಲ್ಲಿ ಮಂಡಿಸಿದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಅವರು ಕೇಂದ್ರ ಸಚಿವ ಸಂಪುಟದಿಂದ ಹೊರಬಂದಿದ್ದಾರೆ ಎಂದು ಹರ್ಚರಣ್ ತಿಳಿಸಿದ್ದಾರೆ.
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವರಾದ ಕೌರ್ ಅವರು ಮೋದಿ ಸರ್ಕಾರದಲ್ಲಿದ್ದ ಏಕೈಕ ಶಿರೋಮಣಿ ಅಕಾಲಿದಳ ಪ್ರತಿನಿಧಿಯಾಗಿದ್ದರು.
ಕೇಂದ್ರದ ರೈತ ವಿರೋಧಿ ಶಾಸನಗಳನ್ನು ವಿರೋಧಿಸಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರೈತರು, ಮಕ್ಕಳು ಮತ್ತು ಸೋದರಿಯರ ಪರವಾದ ನನ್ನ ನಿಲುವಿನ ಬಗ್ಗೆ ನನಗೆ ಹೆಮ್ಮೆ ಇದೆ,’ ಎಂದು ಹರ್ಸಿಮ್ರತ್ ಕೌರ್ ಟ್ವೀಟ್ ಮಾಡಿದ್ದಾರೆ.
Laxmi News 24×7