ಗೋಕಾಕ : ಕೊರೊನಾ ಸೋಂಕಿನ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿರುವದರಿಂದ ಇದನ್ನು ಹೋಗಲಾಡಿಸಲು ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ಘಟಕವನ್ನು ಪ್ರಾರಂಭಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಕಿಟ್ಗಳನ್ನು ಹಸ್ತಾಂತರಿಸುವ ಮುನ್ನ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ದೂರವಾಣಿ ಮೂಲಕ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಕೊರೊನಾ ರೋಗಿಗಳಿಗೆ ಸಮರ್ಪಕ ಆಕ್ಸಿಜನ್ ವ್ಯವಸ್ಥೆ ಇಲ್ಲದ್ದರಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ವ್ಯಾಪ್ತಿಯಲ್ಲಿ ದಾಖಲಾಗಿರುವ ಕೊರೋನಾ ರೋಗಿಗಳಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ಆಕ್ಸಿಜನ್ ಪೂರೈಕೆಯ ಘಟಕಗಳು ಬಹಳಷ್ಟು ಕೇಂದ್ರಗಳಲ್ಲಿ ಲಭ್ಯವಿಲ್ಲ. ಜೀವ ಉಳಿಸುವ ಕೇಂದ್ರಿಕೃತ ಆಮ್ಲಜನಕ ಘಟಕಗಳನ್ನು ಯುದ್ಧೋಪಾದಿಯಲ್ಲಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೊರೊನಾ ಕೇರ್ ಸೆಂಟರ್, ತಾಲೂಕಾ ಸಾರ್ವಜನಿಕ ಆಸ್ಪತ್ರೆ, ವಸತಿ ಶಾಲೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೊಂಕಿತರಿಗಾಗಿ 500 ಹಾಸಿಗೆಗಳನ್ನು ವ್ಯವಸ್ಥೆ ಮಾಡುವಂತೆ ಸೂಚಿಸಿದ ಅವರು, ಜಂಭೋ ಸಿಲಿಂಡರ್, ಪೈಪ್ ಲೈನಿಂಗ್, ಆಕ್ಸಿಜನ್ ಪ್ಲೋ ಮೀಟರ್ಸ್, ನೇಜಲ್ ಕೆನ್ಲಾ, ಇವುಗಳನ್ನೊಳಗೊಂಡ ಕೇಂದ್ರಿಕೃತ ಆಮ್ಲಜನಕ ಪೂರೈಕೆಯ ಘಟಕವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.