ಬೆಂಗಳೂರು: ವಕ್ಫ್ ಮಂಡಳಿ (Waqf Board) ಆಸ್ತಿ ವಿಚಾರವಾಗಿ ರೈತರಿಗೆ ಯಾವುದೇ ನೋಟಿಸ್ ಕೊಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊಟ್ಟಿರುವ ನೋಟಿಸ್ ವಾಪಸ್ ಪಡೆಯಲು ಸೂಚಿಸಿದ್ದಾರೆ ಎಂದು ಗೃಹ ಸಚಿವ ಡಾ.
ಜಿ. ಪರಮೇಶ್ವರ (DR. G. Parameshwar) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಗೃಹಸಚಿವ ಪರಮೇಶ್ವರ (DR. G. Parameshwar), ವಕ್ಫ್ ಮಂಡಳಿ (waqf Board) ಆಸ್ತಿ ವಿಚಾರ ಸದ್ಯ ಮುಗಿದು ಹೋದ ಅಧ್ಯಾಯ. ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತದೆಯೊ ಗೊತ್ತಿಲ್ಲ. ಕಂದಾಯ ಇಲಾಖೆಯಲ್ಲಿನ ದಾಖಲಾತಿ ಹಾಗೂ ವಕ್ಫ್ ದಾಖಲಾತಿಯಲ್ಲಿ ಒಂದೇ ಇದ್ದರೆ ಮಾತ್ರ ಯಾವುದೇ ಗೊಂದಲ ಆಗುವುದಿಲ್ಲ. ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯ. ಅದರಲ್ಲಿ ಏನಿದೆಯೋ ಅದರಂತೆ ದಾಖಲಾಗಲಿದೆ. ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಪ್ರಧಾನಿ ಮೋದಿ (PM Modi) ಅವರನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ರಾಜಕೀಯ ಪುಡಾರಿ ಎಂದು ಕರೆದಿರುವ ಕುರಿತು ಪ್ರತಿಕ್ರಿಯಿಸಿ, ರಾಜಕೀಯ ಪುಡಾರಿ ಅಂದಿದ್ದು ಗೊತ್ತಿಲ್ಲ. ಪುಡಾರಿ ಅನ್ನೋದು ಸರಿನಾ, ತಪ್ಪಾ ಎಂದು ನನಗೆ ಗೊತ್ತಿಲ್ಲ. ನಮ್ಮನ್ನೂ ಪುಡಾರಿ ಅನ್ನುತ್ತಾರೆ. ಪುಡಾರಿ ಶಬ್ದ ಬಳಸುವುದು ಸರಿನಾ ಎಂದು ಪ್ರಶ್ನಿಸಿದ್ದಾರೆ.
ಶಕ್ತಿ ಯೋಜನೆ ಪರಿಷ್ಕರಣೆ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲ ಇಲ್ಲ, ಅನುಷ್ಠಾನ ಆಗುತ್ತಿದೆ. ಆ ಕುರಿತು ಏನೇ ಚರ್ಚೆ ಆದರೂ ಸಚಿವ ಸಂಪುಟಕ್ಕೆ ಬರಬೇಕು. ನಾವು ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಯಾವುದೇ ಚರ್ಚೆ ಮಾಡಿಲ್ಲ. ಗ್ಯಾರಂಟಿ ಮುಂದುವರಿಸುತ್ತೇವೆ ಎಂದು ಪದೇಪದೆ ಹೇಳಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅವರು ಡಿಕೆ ಶಿವಕುಮಾರ್ ಅವರ ಮಾತು ಉಲ್ಲೇಖಿಸಿ ಹೇಳಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. ಪ್ರಧಾನಿ ಮೋದಿ ಅವರೇ ನೀವು ಕೊಟ್ಟ ಭರವಸೆ ಅನುಷ್ಠಾನ ಆಯಿತಾ? 2 ಕೋಟಿ ಉದ್ಯೋಗ ಕೊಡುತ್ತೇನೆ ಅಂದಿದ್ರಿ, ಜಾರಿ ಆಯ್ತಾ. ಪ್ರತಿಯೊಬ್ಬರ ವರಮಾನ ದ್ವಿಗುಣವಾಯ್ತಾ? ತಾವು ಕೊಟ್ಟ ಭರವಸೆ ಅನುಷ್ಠಾನ ಮಾಡಿಲ್ಲ. ನಾವು ಗ್ಯಾರಂಟಿಗಳನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಡಿಕೆ ಶಿವಕುಮಾರ್ ಅವರು ಸಹ ಗ್ಯಾರಂಟಿಗಳನ್ನು ನಿಲ್ಲಿಸ್ತೇವೆ ಅಂದಿಲ್ಲ.
ಗ್ಯಾರಂಟಿಗಳ ಬಗ್ಗೆ ಸಚಿವರು, ಶಾಸಕರು ಸಲಹೆ ಕೊಡುತ್ತಾರೆ. ಹಣದ ಹೊರೆ ಜಾಸ್ತಿಯಾಯ್ತು ಕಮ್ಮಿ ಮಾಡಿ ಅಂತಾರೆ. 2 ಸಾವಿರ ರೂ .ಎಲ್ಲರಿಗೂ ಕೊಟ್ಟಿರುವ ಬಗ್ಗೆನೂ ಶಾಸಕರು ಮಾತಾಡುತ್ತಾರೆ. ಗ್ಯಾರಂಟಿಗಳ ಪರಿಣಾಮ, ಆರ್ಥಿಕ ಹೊರೆ ಬಗ್ಗೆ ನಮಗೂ ಅರಿವಿದೆ. ಸಚಿವರು, ಶಾಸಕರ ಸಲಹೆಗಳನ್ನು ಹಾಗೇ ಇಟ್ಕೊಂಡಿದ್ದೇವೆ. ಆದರೆ ಬಿಜೆಪಿಯವರು ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗೆ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಶ್ಮೀರದಲ್ಲೂ ಹೋಗಿ ಮೋದಿಯವರು ಸಿದ್ದರಾಮಯ್ಯ ಬಗ್ಗೆ, ಮುಡಾ ಬಗ್ಗೆ ಮಾತಾಡುತ್ತಾರೆ. ಬಿಜೆಪಿ ರಾಜಕೀಯ ಮಾಡುತ್ತಿದೆ.
Laxmi News 24×7