ಹೆಚ್ಚಿನ ಆದಾಯ ಸಂಗ್ರಹಿಸುವ ಗುರಿಯೊಂದಿಗೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಆದರೆ, ಇದು ರೈತಾಪಿ ವರ್ಗಕ್ಕೆ ಭಾರಿ ಹೊರೆಯಾಗಿ ಪರಿಣಮಿಸಿದೆ ಎಂದು ವಿಜಯವಾಣಿ ಸಹಾಯವಾಣಿಗೆ ಹಲವು ರೈತರು ಅಳಲು ತೋಡಿಕೊಂಡಿದ್ದರು.
ಈ ಬಗ್ಗೆ ಗದಗ ವರದಿಗಾರ ಶಿವಾನಂದ ಹಿರೇಮಠ ನೀಡಿದ ವರದಿ ಇಲ್ಲಿದೆ.
ಬರದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿ ರೈತರು ಕಂಗಾಲಾ ಗಿರುವ ನಡುವೆಯೇ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕ ಹೆಚ್ಚಿಸಿರುವುದು ರೈತ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿವಿಧ ಸರ್ಕಾರಿ ಯೋಜನೆಗಳಿಗೆ ಮತ್ತು ಕೃಷಿ ಚಟುವಟಿಕೆಗೆ ಅಗತ್ಯವಿರುವ ಮುಚ್ಚಳಿಕೆ ಪತ್ರ, ಪ್ರಮಾಣಪತ್ರ, ವಿವಿಧ ರೀತಿಯ ಬಾಂಡ್ಗಳನ್ನು ಖರೀದಿಸಲು ದುಪ್ಪಟ್ಟು ಹಣ ಪಾವತಿಸುವ ಅನಿವಾರ್ಯ ರೈತರಿಗೆ ಎದುರಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಸರ್ಕಾರ ಹಲವು ಸ್ಟ್ಯಾಂಪ್ ದರಗಳ ಏರಿಕೆ ಮಾಡಿದ್ದರ ಪರಿಣಾಮ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸಮಸ್ಯೆ ಏನು?: ಕೃಷಿ, ನೀರಾವರಿ, ಕಂದಾಯ ಸೇರಿದಂತೆ ಇತರೆ ಇಲಾಖೆಗಳ ಫಲಾನುಭವಿಯಾಗಲು, ಸಬ್ಸಿಡಿ ಪಡೆಯಲು ಮತ್ತು ಹೊಲ-ಗದ್ದೆಯನ್ನು ಸಹೋದರ ಸಂಬಂಧಿಕರ ನಡುವೆ ಇಬ್ಭಾಗ ಮಾಡಿಕೊಳ್ಳಲು ರೈತರು ವಿವಿಧ ರೀತಿಯ ವ್ಯವಹಾರಕ್ಕೆ ವಿವಿಧ ಇಲಾಖೆಗೆ ಬಾಂಡ್, ಮುಚ್ಚಳಿಕೆ ಪತ್ರ, ಪ್ರಮಾಣಪತ್ರ ಸಲ್ಲಿಸಬೇಕು. ಮೊದಲೇ ಬರದ ಹಿನ್ನೆಲೆಯಲ್ಲಿ ರೈತರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಈ ನಡುವೆ ಸ್ಟಾಂಪ್ ದರಗಳನ್ನು ಸರ್ಕಾರ ಮೂರರಿಂದ ನಾಲ್ಕು ಪಟ್ಟು ಹೆಚ್ಚಿಸಿರುವುದು ರೈತರನ್ನು ಚಿಂತೆಗೀಡು ಮಾಡಿದೆ.
ಹಿಸ್ಸಾ ದುಪ್ಪಟ್ಟು: ರೈತರು ಹೊಲ-ಗದ್ದೆಗಳ ಪಾಲುದಾರಿಕೆ ಪಡೆಯಲು ಈ ಮೊದಲು ಎಕರೆ ಲೆಕ್ಕದಲ್ಲಿ 200 ರೂ. ನಿಂದ 1000 ರೂ. ವರೆಗೆ ಸ್ಟಾಂಪ್ ಶುಲ್ಕ ಪಾವತಿಸಬೇಕಿತ್ತು. ಈಗ ಪ್ರತಿ ಹಿಸ್ಸಾಗೆ (ಪ್ರತಿ ಪಾಲುದಾರಿಕೆ) 1,000 ರೂ. ನಿಂದ 5,000 ರೂ. ವರೆಗೆ ಪಾವತಿಸಬೇಕಿದೆ. ಈ ಶುಲ್ಕದಲ್ಲಿ ಶೇ.20 ರಷ್ಟು ಏರಿಕೆ ಆಗಿದೆ.