ಕಾರವಾರ (ಉತ್ತರ ಕನ್ನಡ): ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಶನಿವಾರ ತಡರಾತ್ರಿ ನಗರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಶನಿವಾರ ರಾತ್ರಿ ಕಾರವಾರ ನಗರದ ಬೈತಖೋಲ್ನಲ್ಲಿ ಬೀಟ್ ಕರ್ತವ್ಯದಲ್ಲಿದ್ದ ನಗರ ಠಾಣೆಯ ಕಾನ್ಸ್ಟೇಬಲ್ಗಳಾದ ಗಣೇಶ್ ಕುರಿಯವರ ಹಾಗೂ ಹರೀಶ್ ಗವಾಣಿಕರ ಎಂಬುವರ ಮೇಲೆ ಹಲ್ಲೆ ನಡೆದಿದೆ. ಬೈತಖೋಲ್ ಭೂದೇವಿ ದೇವಸ್ಥಾನದ ಬಳಿ ಮಧ್ಯರಾತ್ರಿ 1.30ರ ವೇಳೆಗೆ ಗುಂಪು ಕಟ್ಟಿಕೊಂಡು ಕುಳಿತಿದ್ದ ತಂಡಕ್ಕೆ ಮನೆಗೆ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು.
ಈಗಾಗಲೇ 10 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗಳಾದ ಬೈತಖೋಲ್ ನಿವಾಸಿ ಸುನೀಲ ಗೌಡ, ಮಂಜುನಾಥ ಗೌಡ, ಸಂದೇಶ್, ರಘುವೀರ, ನಿತಿನ್ ಗೌಡ, ಗಗನ ಗೌಡ, ಅನುರಾಗ ಗೌಡ, ಉಮೇಶ್ ಜನಕಪ್ರಸಾದ್, ವಿತೇಶ ಗೌಡ, ಯುವರಾಜ ಗೌಡ, ಸುಚಿತ ಗೌಡ ಎಂಬುವರ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂಬ್ಯುಲೆನ್ಸ್ನಲ್ಲಿ ಸ್ನೇಹಿತರ ಜಾಲಿಟ್ರಿಪ್, ದಂಡ ವಿಧಿಸಿದ ಪೊಲೀಸರು; ಸಾರ್ವಜನಿಕರ ಬಳಕೆಗಾಗಿ ಇರುವ ಆಂಬ್ಯುಲೆನ್ಸ್ ವಾಹನ ತೆಗೆದುಕೊಂಡು ಪ್ರವಾಸಕ್ಕೆ ಹೊರಟಿದ್ದ ಚಾಲಕ ಸೇರಿ ಏಳು ಜನರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಬಳಿ ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಿರುವ ಘಟನೆ ಇತ್ತೀಚೆಗೆ ನಡೆದಿತ್ತು.