ವಾಸ್ನಾ (ಗುಜರಾತ್): ಗುಜರಾತ್ನಲ್ಲಿ ದೇಶದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಂಟ್ ಎಕ್ಸ್ಮ್ಪವರ್ಅನ್ನು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಕೈಗಾರಿಕೋದ್ಯಮಿ ಮತ್ತು ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ ಸಮ್ಮುಖದಲ್ಲಿ ಉದ್ಘಾಟಿಸಿದರು.
82 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಈ ಕುರಿತು ಸಾಮಾಜಿಕ ಜಾಲತಾಣವಾದ ‘ಎಕ್ಸ್’ (ಟ್ವಿಟರ್)ನಲ್ಲಿ ಕಾರ್ಯಕ್ರಮದ ಫೋಟೋಗಳ ಸಮೇತ ಪೋಸ್ಟ್ ಮಾಡಿದ್ದಾರೆ. “ಗುಜರಾತ್ನ ವಾಸ್ನಾಯ ಚಚಾರ್ವಾಡಿಯಲ್ಲಿ ಭಾರತದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಂಟ್ ಎಕ್ಸ್ಮ್ಪವರ್ಅನ್ನು ಗೌತಮ್ ಅದಾನಿ ಅವರೊಂದಿಗೆ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು” ಅವರು ಬರೆದುಕೊಂಡಿದ್ದಾರೆ.
ಗೌತಮ್ ಅದಾನಿ ಸಮ್ಮುಖದಲ್ಲಿ ಅನುಭವಿ ರಾಜಕಾರಣಿ ಪವಾರ್ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದು ರಾಜಕೀಯ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕೆ ಮಾಡುತ್ತಿರುತ್ತಾರೆ. ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆಯೂ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಕೇವಲ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗೌತಮ್ ಅದಾನಿ ಇಬ್ಬರ ಮಾತನ್ನು ಮಾತ್ರ ಕೇಳುತ್ತಾರೆ ಎಂದು ಆರೋಪಿಸಿದ್ದರು.
ಶರದ್ ಪವಾರ್ ಎನ್ಸಿಪಿ ಪಕ್ಷವು ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಒಟ್ಟಿಗೆ ಎದುರಿಸಲು ಈ ಮೈತ್ರಿಕೂಟ ನಿರ್ಧರಿಸಿದೆ. ಇದರ ನಡುವೆ ಎನ್ಸಿಪಿ ವರಿಷ್ಠ ಪವಾರ್ ಹಾಗೂ ಉದ್ಯಮಿ ಗೌತಮ್ ಅದಾನಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಹಮದಾಬಾದ್ನಲ್ಲಿರುವ ಅದಾನಿ ಅವರ ನಿವಾಸ ಮತ್ತು ಕಚೇರಿಗೂ ಪವಾರ್ ಭೇಟಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಇದಕ್ಕೂ ಮುನ್ನ ಶರದ್ ಪವಾರ್ ಅವರನ್ನು ಗುಜರಾತ್ ಎನ್ ಸಿಪಿ ನಾಯಕ ಜಯಂತ್ ಬೋಸ್ಕಿ ಬರಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.