ಬೆಳಗಾವಿ : ರಾಜ್ಯದಲ್ಲಿ 1995ರಿಂದ ಪ್ರಾರಂಭವಾಗಿರುವ ಅನುದಾನ ರಹಿತ ಶಾಲಾ ಕಾಲೇಜ್ಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಕರ್ನಾಟಕ ಅನುದಾನ ರಹಿತ ಶಾಲಾ ಕಾಲೇಜ್ ನೌಕರರ ಆಡಳಿತ ಮಂಡಳಿಗಳ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ನೇತೃತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ಮೂಲಕ ಆಗಮಿಸಿ, ತಮ್ಮ ಪ್ರಮುಖ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಎಸ್.ಎಸ್.ಮಠದ ಮಾತನಾಡಿ, ರಾಜ್ಯದ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ 1995ರ ನಂತರದಲ್ಲಿ ಪ್ರಾರಂಭವಾದ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಸರ್ಕಾರ ಅನುದಾನ ನೀಡಿಲ್ಲ. ಕಳೆದ 30 ವರ್ಷಗಳಿಂದ ಖಾಸಗಿ ಆಡಳಿತ ಮಂಡಳಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕಟ್ಟಡ, ಸಿಬ್ಬಂದಿ ವೇತನ ಹಾಗೂ ಇತರೆ ಸೌಲಭ್ಯಗಳನ್ನು ರೂಪಿಸಿಕೊಂಡು ಬಂದಿವೆ. ಪ್ರಸ್ತುತ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಶಿಕ್ಷಕರಿಗೆ ವೇತನ ನೀಡಲಾಗುತ್ತಿಲ್ಲ. ಅಧಿಕಾರಿಗಳು ಸರ್ಕಾರಕ್ಕೆ 922 ಕೋಟಿ ರೂ. ಬೇಕು ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ತಮಗೆ ಬೇಕಾಗಿರುವುದು ಕೇವಲ 341 ಕೋಟಿ ರೂ. ಮಾತ್ರ. ಸರ್ಕಾರ ಈ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿ ಗೌರವಾಧ್ಯಕ್ಷ ಎಸ್.ಎಸ್.ಮಠದ, ಜಿಲ್ಲಾಧ್ಯಕ್ಷ ಪಿ.ಪಿ.ಬೆಳಗಾಂವಕರ, ಸಂತೋಷ ಕುರಬೇಟ, ಅನಿಲ ಯಾದವ, ಸಲೀಮ್ ಕಿತ್ತೂರ, ಮಾರುತಿ ಅಜಾನಿ, ಪ್ರಸನ್ನ ಮಠದ, ವೀಣಾ ಪತ್ಕಿ, ಸಂಗೀತಾ ಕೊಳ್ಳಿ, ಜ್ಯೋತಿ ದನಾಯಿ, ಶೋಭಾ ಚೌಗಲೆ, ಜಯಶ್ರೀ ಕುರಬೇಟ ಇತರರಿದ್ದರು.
Laxmi News 24×7