ಬೀದರ್: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿದ ಆರೋಪದ ಮೇರೆಗೆ ಇಂದು ಎಸಿಬಿ ಅಧಿಕಾರಿಗಳು ಜಿಲ್ಲೆಯ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಿರಿಯ ಅಭಿಯಂತರ ಸುರೇಶ್ ಮೋರೆ ಮನೆ ಹಾಗೂ ಅವರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.
ಸುರೇಶ್ ಮೋರೆ ಮೂಲತಃ ಭಾಲ್ಕಿ ತಾಲೂಕಿನ ಮೇಹಕರ್ ಗ್ರಾಮದ ನಿವಾಸಿಯಾಗಿದ್ದಾರೆ. ಹೀಗಾಗಿ ಬಸವಕಲ್ಯಾಣ, ಮೇಹಕರ ಮನೆ ಹಾಗೂ ಮೇಹಕರನಲ್ಲಿರುವ ಒಂದು ಪೆಟ್ರೋಲ್ ಬಂಕ್ ಸೇರಿದಂತೆ ಒಟ್ಟು 4 ಕಡೆಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಎಸಿಬಿ ಕಲಬುರ್ಗಿ ಎಸ್ಪಿ ಮಹೇಶ ಮೇಘಣ್ಣನವರ ನೇತೃತ್ವದಲ್ಲಿ ಜೆಇ ಸುರೇಶ ಮೊರೆ ಅವರಿಗೆ ಸೇರಿದ ನಗರದ ಶಿವಾಜಿ ನಗರದಲ್ಲಿರುವ ಮನೆ ಮೇಲೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು, ಮನೆಯಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಸುರೇಶ್ ಮೋರೆ ಅವರು ಜೆಇ ಆಗಿ ಬೀದರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದಾಳಿ ವೇಳೆ ಬಸವಕಲ್ಯಾಣದ ಮನೆಯಲ್ಲಿ 760 ಗ್ರಾಂ ಚಿನ್ನ, 1,941 ಗ್ರಾಂ ಬೆಳ್ಳಿ, 17 ಲಕ್ಷ ರೂಪಾಯಿ ನಗದು ಹಣ, ಒಂದು ಕಾರು, ಒಂದು ಮೋಟರ್ ಸೈಕಲ್ ಪತ್ತೆಯಾಗಿದೆ. ಉಳಿದಂತೆ ಮೇಹಕರನಲ್ಲಿರುವ ಪೇಟ್ರೋಲ್ ಬಂಕ್ ನಲ್ಲಿ 25 ಲಕ್ಷ ರೂಪಾಯಿ ನಗದು, 90 ಗ್ರಾಂ.ಚಿನ್ನ, ಬಸವಕಲ್ಯಾಣದಲ್ಲಿ ಎರಡು ಮತ್ತು ಭಾಲ್ಕಿಯಲ್ಲಿ ಎರಡು ಪ್ಲಾಟ್ ಗಳು ಹೊಂದಿದ್ದಾರೆ ಎನ್ನಲಾಗಿದೆ. ಈ ದಾಳಿಯಲ್ಲಿ ಬೀದರ್ ಡಿಎಸ್ಪಿ ಹಣಮಂತರಾಯ, ಪಿಐ ವೆಂಕಟೇಶ ಎಡಹಳ್ಳಿ, ಶರಣಬಸಪ್ಪ ಕೊಡ್ಲಾ, ನಿರಂಜನ, ಹೆಚ್ಸಿಗಳಾದ ಶ್ರೀಕಾಂತ, ಮರೇಪ್ಪ, ಕಿಶೋರ, ಅನೀಲ, ಸರಸ್ವತಿ ಅವರು ಭಾಗಿಯಾಗಿದ್ದರು.