ಬೆಂಗಳೂರು: ನಗರದ ಬಸವನಗುಡಿಯ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಡಾ ಶಂಕರ ಗುಹಾ ದ್ವಾರಕನಾಥ್ ಬೆಳ್ಳೂರು ಪತ್ರಿಕಾಗೋಷ್ಟಿ ನಡೆಸಿದ್ರು. ಈ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಎರಡು ವರ್ಷಗಳಾಗ್ತಾ ಬಂತು. ಇದನ್ನ ಸಿಐಡಿ ತನಿಖೆಗೆ ವಹಿಸಲಾಗಿದೆ. ಆದರೆ ಏನು ತನಿಖೆ ಆಗ್ತಾ ಇದೆ ಅನ್ನೊದು ಗೊತ್ತಿಲ್ಲ. ವಾಸ್ತವದಲ್ಲಿ ಸಿಐಡಿಗೆ ಇಷ್ಟು ದೊಡ್ಡ ಹಗರಣ ತನಿಖೆ ಮಾಡಲು ಸಾಮರ್ಥ್ಯ ಇಲ್ಲ. ಈಗಾಗಲೇ ಸುಮಾರು ಠೇವಣಿದಾರರು ಮೃತರಾಗಿದ್ದಾರೆ ಎಂದು ಹೇಳಿದ್ರು.
ಈ ಹಗರಣದಲ್ಲಿ ಬಿಜೆಪಿಯ ಮಾಜಿ ಎಮ್ಎಲ್ಸಿ ಅಶ್ವಥ್ ನಾರಾಯಣ್ ಡೀಫಾಲ್ಟರ್ 12 ಕೋಟಿ ರೂಪಾಯಿ ಹಣ ಕಟ್ಟಿಲ್ಲ. ಸರ್ಕಾರ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು. ಸಿಎಂ ಯಡಿಯೂರಪ್ಪ ಈ ಬಗ್ಗೆ ಗಮನ ನೀಡಬೇಕೆಂದು ಡಾ ಶಂಕರ ಗುಹಾ ಮನವಿ ಮಾಡಿದ್ದಾರೆ. ತುರ್ತು ಕ್ರಮ ಜರುಗಿಸದೇ ಇದ್ರೆ ಆರ್ಬಿಐ ಚಲೋ ನಡೆಸಬೇಕಾಗುತ್ತೆ. ರಾಜಕೀಯ ಹಿತಾಸಕ್ತಿ ಬಿಟ್ಟು ಗ್ರಾಹಕರ ಪರವಾಗಿ ಕೆಲಸ ಮಾಡಬೇಕಿದೆ. ಕೇಂದ್ರ ಹಣಕಾಸು ಸಚಿವೆ ಕೂಡ ಬೇಜವಾಬ್ದಾರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಆರ್ಬಿಐ ಕೂಡ ಈ ವಂಚನೆಗಳನ್ನ ನೋಡಿಕೊಂಡು ಯಾಕೆ ಸುಮ್ಮನಿದೆ. ಆರ್ಬಿಐ ತುರ್ತಾಗಿ ಕ್ರಮಕೈಗೊಳ್ಳಬೇಕಿದೆ. 25 ಸಾವಿರ ಜನ ಹಣವನ್ನ ಕಳೆದುಕೊಂಡಿದ್ದಾರೆ.
ಸಿಐಡಿ ಸ್ಟ್ರಾಂಗ್ ಕೇಸ್ ಮಾಡಿಲ್ಲ. 2130 ಕೋಟಿ ರೂಪಾಯಿ ಗ್ರಾಹಕರಿಗೆ ವಾಪಸ್ ಬರಬೇಕಿದೆ. ಆದರೆ ಆರ್ಬಿಐ ಮಾತ್ರ ಸ್ಪಷ್ಟ ಕ್ರಮ ಕೈಗೊಳ್ಳುತ್ತಿಲ್ಲ. ಈಗಾಗಲೇ ಹಣ ಕಳೆದುಕೊಂಡ ಹಲವರು ಸಾವನ್ನಪ್ಪಿದ್ದಾರೆ. ಆಡಿಟ್ ರಿಪೋರ್ಟ್ ನೆಪದಲ್ಲಿ ಸಮಯ ತಳ್ಳುತ್ತಿದ್ದಾರೆ. ವಿಳಂಬದ ಹಿಂದೆ ರಾಜಕೀಯ ಹಿತಾಸಕ್ತಿ ಕಾಣುತ್ತಿದೆ. ಸ್ಥಳೀಯ ರಾಜಕಾರಣಿಗಳ ವಿರುದ್ದ ಗಂಭೀರ ಆರೋಪ ಕೇಳಿ ಬರುತ್ತಿದೆ ಎಂದು ಡಾ ಶಂಕರ ಗುಹಾ ದ್ವಾರಕನಾಥ್ ಈ ಪ್ರಕರಣದ ಬಗ್ಗೆ ಗಮನ ಹರಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.