ನವ ದೆಹಲಿ (ಜುಲೈ. 10): ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿ ಪಕ್ಷದ ಎಲ್ಲಾ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿ ಹಿಂತಿರುಗಿದ ನಂತರವೂ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಿಸಬೇಕು ಎಂದು ಪ್ರಯತ್ನಿಸುತ್ತಿರುವ ರಾಜ್ಯ ಬಿಜೆಪಿಯ ಒಂದು ಬಣದ ಗುಂಪಿನ ಪ್ರಯತ್ನ ಇನ್ನೂ ನಿಂತಿಲ್ಲ. ಮೊದಲಿಗೆ ಭಾರೀ ಸದ್ದಿನೊಂದಿಗೆ ನಡೆಯುತ್ತಿದ್ದ ಕಸರತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಹೋದ ಮೇಲೆ ಸದ್ದಿಲ್ಲದೆ ನಡೆಯುತ್ತಿರುವಂತೆ ಕಾಣಿಸುತ್ತಿದೆ. ಇದರ ಮುಂದುವರಿದ ಭಾಗ ಎಂಬಂತೆ ಸದ್ಯದ ಯಡಿಯೂರಪ್ಪ ಪಾಲಿನ ‘ವಿಪಕ್ಷ ನಾಯಕ’ ಬಸವನಗೌಡ ಪಾಟೀಲ್ ಯತ್ನಾಳ್ ದಿಢೀರನೆ ದೆಹಲಿಗೆ ತೆರಳಿರುವುದು ಸದ್ಯಕ್ಕಂತೂ ಕುತೂಹಲಕಾರಿ ಬೆಳವಣಿಗೆಯಾಗಿ ಗೋಚರಿಸುತ್ತಿದೆ.
ರಾಜ್ಯದಿಂದ ಹೊಸದಾಗಿ ಒಕ್ಕೂಟ ಸರ್ಕಾರದ ಸಚಿವರಾಗಿರುವವರಿಗೆ ಅಭಿನಂದನೆ ಸಲ್ಲಿಸಲು ದೆಹಲಿಗೆ ಬಂದಿದ್ದೇನೆ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೊಳ್ಳುತ್ತಾರೆ. ಅದು ನೆಪ, ಜಪ ಮಾತ್ರ ನಾಯಕತ್ವ ಬದಲಾವಣೆ. ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ದೆಹಲಿಗೆ ಬಂದಿದ್ದಾರೋ ಅಥವಾ ಹೈಕಮಾಂಡ್ ನಾಯಕರೇ ಕರೆ ಮಾಡಿ ಕರೆಸಿಕೊಂಡಿದ್ದಾರೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಏಕೆಂದರೆ ಇತ್ತೀಚೆಗೆ ಗಣಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಕರೆಸಿಕೊಂಡು ಮಾತನಾಡಿದ್ದರು. ಅದರ ಮುಂದುವರೆದ ಭಾಗವಾಗಿ ಪಂಚಮಸಾಲಿ ಸಮುದಾಯದ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೂ ಬುಲಾವ್ ನೀಡಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಯತ್ನಾಳ್ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ನಿನ್ನೆಯೇ ದೆಹಲಿ ತಲುಪಿರುವ ಬಸವನಗೌಡ ಪಾಟೀಲ್ ಯತ್ನಾಳ್ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡುವ ಸಾಧ್ಯತೆ ಇದೆ.
ಭೇಟಿ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ದೂರು ನೀಡುವ ಸಾಧ್ಯತೆ ಇದೆ. ಪದೇ ಪದೇ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯತ್ನಾಳ್, ಈಗ ಅಮಿತ್ ಶಾ ಎದುರು ದಾಖಲೆಗಳನ್ನು ಇಟ್ಟು ದೂರು ನೀಡಲಿದ್ದಾರೆ ಎಂದು ತಿಳಿದುಬಂದಿದೆ.ಯಡಿಯೂರಪ್ಪ ಮತ್ತು ವಿಜಯೇಂದ್ರ ಭ್ರಷ್ಟಾಚಾರದ ವಿಚಾರ ತಿಳಿಸಿ ನಾಯಕತ್ವ ಬದಲಾವಣೆ ಪ್ರಸ್ತಾಪ ಮುಂದಿಡಲೆಂದು ಬಹಳ ದಿನಗಳಿಂದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಅಮಿತ್ ಶಾ ಭೇಟಿಗೆ ಅವಕಾಶ ಕೇಳಿದ್ದರು. ಈಗ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಯತ್ನ ಯಶಸ್ವಿಯಾಗಿದೆ. ಅಮಿತ್ ಶಾ ಕಚೇರಿಯಿಂದ ಕರೆ ಬಂದಿದೆ. ಇದೇ ಹಿನ್ನಲೆಯಲ್ಲಿ ದಾಖಲೆಗಳನ್ನು ತೆಗೆದುಕೊಂಡು ಯತ್ನಾಳ್ ದೆಹಲಿಗೆ ಧಾವಿಸಿದ್ದಾರೆ ಎಂಬುದಾಗಿ ಕೂಡ ತಿಳಿದುಬಂದಿದೆ.