ಹಾವೇರಿ: ‘ತಿಳವಳ್ಳಿ ಗ್ರಾಮದ ಹರ್ಡೇಕಲ್ ಸರ್ಕಲ್ ಬಳಿ ಭಾನುವಾರ ಪೊಲೀಸರು ದಾಳಿ ನಡೆಸಿ, ₹2 ಲಕ್ಷ ಮೌಲ್ಯದ 50 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೊಬೈಲ್ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಹಾನಗಲ್ ತಾಲ್ಲೂಕು ಹುಲಗಿನಕೊಪ್ಪ ಗ್ರಾಮದ ನಿತಿನ್ ಗೌಂಡಿ ಬಂಧಿತ ಆರೋಪಿ. ಅದೇ ಗ್ರಾಮದ ಮಧು ಕೆರೇಕ್ಯಾತನಹಳ್ಳಿ ಓಡಿ ಹೋಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.
ನಿತಿನ್ ಎಂಬ ಆರೋಪಿ ಮೊಬೈಲ್ಗಳ ಬಗ್ಗೆ ಯಾವುದೇ ದಾಖಲೆ ಇಟ್ಟುಕೊಂಡಿರಲಿಲ್ಲ. ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಧು ಎಂಬ ಆರೋಪಿಯ ಮೇಲೆ, ಹಿಂದೆ ಮೊಬೈಲ್ ಕಳ್ಳತನದ ಕುರಿತು ಪ್ರಕರಣ ದಾಖಲಾಗಿದೆ. ಹುಲಗಿನಕೊಪ್ಪ ಗ್ರಾಮದಲ್ಲಿ ಮೊಬೈಲ್ ಕಳ್ಳರು ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಪ್ರಕರಣ ಬಗ್ಗೆ ಆಳವಾದ ತನಿಖೆ ನಡೆಸಲು ‘ವಿಶೇಷ ತಂಡ’ ರಚನೆ ಮಾಡಲಾಗುವುದು ಎಂದು ಹೇಳಿದರು.
ನೀಲಪ್ಪ ನರಲಾರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎನ್.ಕೆ. ನಿಂಗನಹಳ್ಳಿ, ಜೆ.ಸಿ.ರಾಠೋಡ, ಎಸ್.ಎಂ.ಕಂಬಳಿ, ಎಂ.ಎಂ. ಮಾದರ, ಎಸ್.ಜಿ.ಸೋಮಸಾಗರ, ಬಿ.ಎಚ್. ಗೋಡಿಹಾಳ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಎಎಸ್ಪಿ ವಿಜಯಕುಮಾರ ಸಂತೋಷ, ಶಿಗ್ಗಾವಿ ಡಿವೈಎಸ್ಪಿ ಓ.ಬಿ. ಕಲ್ಲೇಶಪ್ಪ, ಹಾನಗಲ್ ಸಿಪಿಐ ಶಿವಶಂಕರ ಗಣಾಚಾರಿ ಇದ್ದರು.
 Laxmi News 24×7
Laxmi News 24×7
				 
		 
						
					 
						
					