ಹಾವೇರಿ: ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಾದ ಇಸ್ಪೀಟ್, ಓಸಿ, ಗಾಂಜಾ ಎಗ್ಗಿಲ್ಲದೇ ನಡೆಯುತ್ತಿವೆ. ಕೂಡಲೇ ಅವುಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಕಾರ್ಯಕರ್ತರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ‘ಹಾವೇರಿ ಜಿಲ್ಲೆ ನಾಡಿನ ಹೆಸರಾಂತ ಸಂತ ಶರಣರ ಹಾಗೂ ಸಾಹಿತಿಗಳ ನೆಲೆಬೀಡಾಗಿದೆ. ಇಂತಹ ನೆಲದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ವಿಷಾದಕರ. ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಇಲಾಖೆ ವಿಫಲವಾಗಿದೆ. ಅಕ್ರಮವಾಗಿ ಕಾಳ ಸಂತೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಿರಾಣಿ, ಚಹಾ, ಬೀಡಿ ಅಂಗಡಿಗಳು ಹಾಗೂ ಮನೆಗಳಲ್ಲೂ ಸಾರಾಯಿ ಮಾರಾಟವಾಗುತ್ತಿದೆ ಎಂದು ದೂರಿದರು.
ಜಿಲ್ಲಾ ಕಾರ್ಯಾಧ್ಯಕ್ಷ ನೂರ್ ಅಹಮದ್ ಲಕ್ಷ್ಮೇಶ್ವರ, ಸಿ.ಬಿ ದೊಡ್ಡಗೌಡ್ರ, ಯಲ್ಲಪ್ಪ ಮರಾಠೆ, ಮಹಮ್ಮದ್ ಯುಸೂಫ್ ಸೈಕಲ್ಗಾರ, ನಾಗರಾಜ ಮಲ್ಲಮ್ಮನವರ, ಮಂಜುನಾಥ ದೊಡ್ಡಮನಿ, ದಾದಾಪೀರ್ ಮಲ್ಲಾಡದ, ನಿಂಗರಾಜ ಕರಡೆಮ್ಮನವರ, ಮಾಲತೇಶ ಅಚ್ಚಿಗೇರಿ, ಮಂಜುಳಾ ಕೊರವರ, ಯಲ್ಲಪ್ಪ ಹಾವೇರಿ ಇದ್ದರು.
Laxmi News 24×7