ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಒಂದು ದೇಶ ಒಂದು ದರವನ್ನು ರಾಜ್ಯ ಸರ್ಕಾರ ಜಾರಿ ಮಾಡಬೇಕು. ಅಲ್ಲದೆ ಎಪಿಎಂಸಿ ಸೆಸ್ ಗೊಂದಲವನ್ನು ರಾಜ್ಯ ಸರ್ಕಾರ ನಿವಾರಣೆ ಮಾಡಬೇಕೆಂದು ಒತ್ತಾಯಿಸಿ ಜು.27ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟ ಅವಧಿಯವರೆಗೆ 162 ಎಪಿಎಂಸಿ ಬಂದ್ ಮಾಡಲಾಗುತ್ತದೆ ಎಂದು ಚೆಂಬರ್ ಆಫ್ ಕಾಮರ್ಸ್ ಮುಖ್ಯಸ್ಥ ಶಂಕರಣ್ಣ ಮುನವಳ್ಳಿ ಎಚ್ಚರಿಸಿದ್ದಾರೆ.
ನಗರದಲ್ಲಿ ಇಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಪದಾಧಿಕಾರಿಗಳ ಹಾಗೂ ವರ್ತಕರ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನೀಡಿರುವ ಒಂದು ದೇಶ ಒಂದು ದರ ನಿರ್ದೇಶನವನ್ನು ಜಾರಿಗೊಳಿಸಿದರೆ ಯಾವುದೇ ಗೊಂದಲ ಸೃಷ್ಟಿಯಾಗುವುದಿಲ್ಲ. ಅಲ್ಲದೆ ಎಪಿಎಂಸಿಯಲ್ಲಿ ಸಂಗ್ರಹಿಸುತ್ತಿರುವ ಶೇ.1ರಷ್ಟು ಸೆಸ್ ಸಂಗ್ರಹ ಕೈ ಬಿಡಬೇಕು. ಇದಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಬಂದಿರುವ ಎಪಿಎಂಸಿ ವರ್ತಕರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ಗದಗ, ಹಾವೇರಿ, ರಾಣೇಬೆನ್ನೂರ, ವಿಜಯಪುರ ಸೇರಿದಂತೆ ರಾಜ್ಯದ ಎಲ್ಲ ಎಪಿಎಂಸಿ ವರ್ತಕರ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ರೈತರು ಹತ್ತಿ, ಶೇಂಗಾ ಹಾಗೂ ಒಣ ಪದಾರ್ಥ ಉತ್ಪನ್ನಗಳನ್ನು ಎಪಿಎಂಸಿಗೆ ತೆಗೆದುಕೊಂಡು ಬರಬಾರದು ಎಂದು ಮನವಿ ಮಾಡಿದರು.
Laxmi News 24×7