ಅಕ್ರಮ ಮರಳು ಅಡ್ಡೆಗಳ ಮೇಲೆ ಬೆಂಗಳೂರು ಲೋಕಾಯುಕ್ತರ ಅನಿರೀಕ್ಷಿತ ದಾಳಿ
ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು!!!
ಹುನಗುಂದ ಮತ್ತು ಇಳಕಲ್ ತಾಲೂಕುಗಳಲ್ಲಿ ಅವ್ಯಾಹತ ಮರಳು ದಂಧೆ
ಬಾಗಲಕೋಟೆ ಜಿಲ್ಲೆಯ ಹುನಗುಂದ ಮತ್ತು ಇಳಕಲ್ ತಾಲೂಕುಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಬೆಂಗಳೂರಿನ ಲೋಕಾಯುಕ್ತ ತಂಡ ಧಿಡೀರ್ ದಾಳಿ ನಡೆಸುವ ಮೂಲಕ ಬ್ರೇಕ್ ಹಾಕಿದೆ.
ಸ್ಥಳೀಯ ಅಧಿಕಾರಿಗಳು ಈ ದಂಧೆಗೆ ಸಾಥ್ ನೀಡುತ್ತಿರುವ ಶಂಕೆಯ ಹಿನ್ನೆಲೆಯಲ್ಲಿ, ಜಿಲ್ಲಾ ಅಧಿಕಾರಿಗಳಿಗೂ ಸುಳಿವು ನೀಡದಂತೆ ಲೋಕಾಯುಕ್ತ ಅಧಿಕಾರಿ ಎಸ್.ಬಿ. ಪಾಟೀಲ್ ನೇತೃತ್ವದ ತಂಡ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಈ ಕಾರ್ಯಾಚರಣೆ ನಡೆಸಿದೆ. ಶಾಸಕ ವಿಜಯಾನಂದ ಕಾಶಪ್ಪನವರ ಕ್ಷೇತ್ರ ವ್ಯಾಪ್ತಿಯ ಚಿತ್ತವಾಡಗಿ ಗ್ರಾಮದ ಮರಳು ಅಡ್ಡೆಯ ಮೇಲೆ ದಾಳಿ ನಡೆದಾಗ ದಂಧೆಕೋರರು ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದು, ಸ್ಥಳೀಯ ತಹಸೀಲ್ದಾರ್ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಲೋಕಾಯುಕ್ತರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಭರ್ಜರಿ ಕಾರ್ಯಾಚರಣೆಯಲ್ಲಿ ಒಟ್ಟು 6 ಟಿಪ್ಪರ್ ಹಾಗೂ 3 ಜೆಸಿಬಿ ಯಂತ್ರಗಳನ್ನು ಜಪ್ತಿ ಮಾಡಲಾಗಿದ್ದು, ಮೂವರು ಚಾಲಕರನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಹಾಡುಹಗಲೇ ಅಕ್ರಮ ದಂಧೆ ನಡೆಯುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿಯೇ ಪ್ರಕರಣ ದಾಖಲಿಸಿಕೊಂಡು ಬಂದಿದ್ದ ತಂಡವು ಅತ್ಯಂತ ಗೌಪ್ಯವಾಗಿ ಈ ದಾಳಿ ಸಂಘಟಿಸಿದ್ದು, ಜಿಲ್ಲೆಯ ಮರಳು ಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ಭಾರೀ ನಡುಕ ಹುಟ್ಟಿಸಿದೆ.
Laxmi News 24×7