ಚಿಕ್ಕೋಡಿ: ಕಲೆಕ್ಷನ್ ಕಿಂಗ್ ಅಂದ್ರೆ ವಿಜಯೇಂದ್ರ, ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಕೆಳಗೆ ಇಳಿಸುತ್ತಿರುವ ವ್ಯಕ್ತಿ ಅಂದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಯತ್ನಾಳ್ ದಾಟಿಯಂತೆ ವಿಜಯೇಂದ್ರ ಮೇಲೆ ನೇರಾನೇರ ಆರೋಪ ಮಾಡಿದರು.
ರಾಜ್ಯದ ಖಜಾನೆ ಖಾಲಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಖುಷಿ ಪಡಿಸಿದ್ದೀರಿ ಎಂದು ವಿಜಯೇಂದ್ರ ಅವರ ಹೇಳಿಕೆ ವಿಚಾರವಾಗಿ ಡಿ.ಕೆ. ಶಿವಕುಮಾರ್ ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿ, ವಿಜಯೇಂದ್ರ ಅವರಿಗೆ ಅನುಭವ ಕೊರತೆ ಇದೆ. ಯಾವ ಖಜಾನೆ ಖಾಲಿಯಾಗಿದೆ? ಬಂದು ಅಸೆಂಬ್ಲಿಯಲ್ಲಿ ಹೇಳಬೇಕು. ತಪ್ಪಿಸಿಕೊಂಡು ಓಡಾಡೋದಲ್ಲ. ಬಂದು ಅಧಿವೇಶನದಲ್ಲಿ ಮಾತನಾಡಬೇಕು. ಯಾವ ಖಜಾನೆ ಅಂತ ಹೇಳಬೇಕು. ಇಲ್ಲವಾದರೆ ನಿಮ್ಮ ವ್ಯವಹಾರ ಮತ್ತು ನಿಮ್ಮ ಖಾತೆ ಬಿಚ್ಚಬೇಕಾ? ಎಂದು ಮರು ಪ್ರಶ್ನೆ ಹಾಕಿದರು.
ವಿಜಯೇಂದ್ರ ಇತಿಮಿತಿಯಲ್ಲಿ ಮಾತನಾಡಬೇಕು. ಪಕ್ಷದ ಅಧ್ಯಕ್ಷರಾಗಿದ್ದಾರೆ. ಸದನದಲ್ಲಿ ಬಂದು ಮಾತನಾಡಲಿ. ಕಲೆಕ್ಷನ್ ಕಿಂಗ್ ಅಂದ್ರೆ ವಿಜಯೇಂದ್ರ, ಅವರ ಅಪ್ಪನ ಹೆಸರು ಇಳಿಸುತ್ತಿದ್ದಾರೆ ಎಂದು ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇವತ್ತು ಸದನದಲ್ಲಿ ಉತ್ತರ ಕರ್ನಾಟಕದ ಚರ್ಚೆ ಬಗ್ಗೆ ಸಿಎಂ ಸದನದಲ್ಲಿ ಉತ್ತರ ನೀಡಲಿದ್ದಾರೆ. ಜೊತೆಗೆ ನಾನು ಕೂಡ ಅವಕಾಶ ಸಿಕ್ಕರೆ ಕೃಷ್ಣಾ ಮೇಲ್ದಂಡೆ ಯೋಜನೆ, ಮಹಾದಾಯಿ, ನೀರಾವರಿ ಯೋಜನೆ ಬಗ್ಗೆ ಸದನಕ್ಕೆ ಮಾಹಿತಿ ನೀಡುತ್ತೇನೆ. ಚಳಿಗಾಲದ ಅಧಿವೇಶನ ತುಂಬಾ ಸಮಾಧಾನಕರವಾಗಿ ನಡೆದಿದೆ. ರೈತರಿಗೆ ಅನುಕೂಲವಾಗಿದೆ. ಕಬ್ಬು ಮೆಕ್ಕೆಜೋಳ ಸಮಸ್ಯೆ ಬಗೆಹರಿಸಲಾಗಿದೆ. ಇದರಿಂದ ಈ ಸರ್ಕಾರದ ಬಗ್ಗೆ ರೈತರು ಗಮನದಲ್ಲಿ ಇಟ್ಟುಕೊಳ್ಳಬೇಕೆಂದು ಪ್ರಾರ್ಥನೆ ಸಲ್ಲಿಸುತ್ತೇನೆ ಎಂದರು.
Laxmi News 24×7