ಮೈಸೂರು: ಚುಮು ಚುಮು ಚಳಿಯ ನಡುವೆ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಮಾಗಿ ಸಂಭ್ರಮಕ್ಕೆ ಚಾಲನೆ ದೊರೆಯಿತು. ಮೇಳದಲ್ಲಿ ಅವರೆಕಾಯಿ, ತೊಗರಿ, ಹಸಿ ಕಡಲೆಕಾಯಿ, ಪರ್ಪಲ್ ಯಾಮ್, ಕೆಂಪು ಮುಸುಕಿನ ಜೋಳ, ಬಳ್ಳಿ ಆಲೂಗೆಡ್ಡೆ ಮೊದಲಾದ ಹೊಸದಾಗಿ ಕೊಯ್ಲಾದ ಬೆಳೆಗಳು ಮಾರಾಟ ಮತ್ತು ಪ್ರದರ್ಶನಕ್ಕೆ ಬಂದಿವೆ.
ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ತುಮಕೂರು, ಧಾರವಾಡ, ಬೆಂಗಳೂರು ಜಿಲ್ಲೆಗಳಿಂದ ಚಿನುಗಲು, ದಬ್ಬೆ, ಕೆಂಪು, ಮಣಿ, ಹಿತ್ತಲ ಅವರೆ ಮಾರಾಟಕ್ಕೆ ಬಂದಿವೆ. ಅವರೆ ಕಾಯಿಯ ಜತೆಗೆ, ಅವರೆಕಾಳು ಉಪ್ಪಿಟ್ಟು, ಅವರೆಕಾಳು ದೋಸೆ, ಮುದ್ದೆ – ಹಿಚುಕಿದ ಅವರೆಕಾಳು ಸಾರು, ಅವರೆಕಾಳು ಬಾತ್, ಅವರೆಕಾಳಿನ ಜಾಮೂನು ಬಾಯಿ ಚಪ್ಪರಿಸಲು ಸಿಗುತ್ತಿವೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಕಾಳು ಪಲ್ಯದ ಅಡುಗೆಗಳನ್ನು ಸವಿಯಬಹುದು.ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ಸಿರಿಧಾನ್ಯ, ಜವಾರಿ ಬೇಳೆಕಾಳುಗಳು ಹಾಗೂ ಕೆಂಪಕ್ಕಿ ಮೊದಲಾದ ದೇಸಿ ಅಕ್ಕಿಗಳನ್ನು ಮಾರಾಟಕ್ಕೆ ತಂದಿದೆ. ಪ್ರದರ್ಶನಕ್ಕೆ ಬಂದಿರುವ ವಿವಿಧ ಗಾತ್ರ ಮತ್ತು ಆಕಾರದ ವೈವಿಧ್ಯಮಯ ಸೋರೆಕಾಯಿ ನೋಡುಗರನ್ನು ಆಕರ್ಷಿಸುತ್ತಿವೆ. ಕ್ರಿಸ್ಮಸ್ ಹಬ್ಬಕ್ಕೆ ಆಕರ್ಷಕ ಬೊಂಬೆಗಳು ಹಾಗೂ ವೈವಿಧ್ಯಮಯ ಸೋರೆ ಕಲಾಕೃತಿಗಳನ್ನು ಮಾರಾಟ ಮಾಡಲಾಗುತ್ತಿದೆ.
Laxmi News 24×7