ಬೆಂಗಳೂರು: ದೆಹಲಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕರೆಸಿ, ಹೇಗೆ ಮುಂದುವರೆಯಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.
ಸದಾಶಿವನಗರ ನಿವಾಸದಲ್ಲಿ ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಅವರು, ”ನಾನು ದೆಹಲಿಗೆ ಹೋದ ಮೇಲೆ ಮಾತುಕತೆ ನಡೆಯಲಿದೆ. ಪ್ರಮುಖ ಮೂರ್ನಾಲ್ಕು ಜನರನ್ನು ಕರೆಸಿ ಮಾತನಾಡುತ್ತೇನೆ. ಹೇಗೆ ಮುಂದುವರೆಯಬೇಕೆಂದು ತೀರ್ಮಾನ ಮಾಡ್ತೇನೆ. ಸಿಎಂ, ಡಿಸಿಎಂ ಅವರೆಲ್ಲರನ್ನು ಕರೆಸಿಯೇ ಮಾತನಾಡ್ತೇನೆ. ಎಲ್ಲವನ್ನೂ ಸೆಟಲ್ ಮಾಡುತ್ತೇವೆ” ಎಂದರು.
ಎಐಸಿಸಿ ಅಧ್ಯಕ್ಷ ದೆಹಲಿಗೆ ತೆರಳುವ ಹಿನ್ನೆಲೆಯಲ್ಲಿ, ಖರ್ಗೆ ನಿವಾಸಕ್ಕೆ ಹಲವು ನಾಯಕರ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಸಚಿವ ಪ್ರಿಯಾಂಕ್ ಖರ್ಗೆ, ಡಿ. ಸುಧಾಕರ್ ಹಾಗೂ ಪ್ರಕಾಶ್ ಹುಕ್ಕೇರಿ ಸೇರಿದಂತೆ ಹಲವರು ಭೇಟಿ ನೀಡಿ ಚರ್ಚೆ ನಡೆಸಿದರು. ಕೆಲವರು ಸಂಪುಟ ಸೇರ್ಪಡೆ ಸಂಬಂಧ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಗರಿಗೆದರಿದ ರಾಜಕೀಯ ಚಟುವಟಿಕೆ: ಇತ್ತ ದೆಹಲಿಯಲ್ಲಿ ರಾಜ್ಯದ ಪವರ್ ಫೈಟ್ ಅಂತಿಮ ಹಂತಕ್ಕೆ ತಲುಪಿದ್ದು, ಹೈಕಮಾಂಡ್ ಸಭೆ ನಡೆಸಲಿರುವ ಕಾರಣ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ರಾಜಕೀಯ ಕಂಡು ಬರುತ್ತಿದೆ. ನಾಯಕರುಗಳ ಸರಣಿ ಸಭೆಗಳು ನಡೆಯುತ್ತಿವೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಆಪ್ತರ ಬಳಗ, ಅಂಹಿಂದ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಅಹಿಂದ ನಾಯಕರು ಸಭೆ ನಡೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಹೈಕಮಾಂಡ್ ಸಭೆ ನಡೆಸುವ ಹಿನ್ನೆಲೆ ಯಾವ ರೀತಿ ರಣತಂತ್ರ ರೂಪಿಸಬೇಕು, ಅಧಿಕಾರ ಹಸ್ತಾಂತರ ಮಾಡಿದರೆ ಯಾವ ರೀತಿಯ ಕಾರ್ಯತಂತ್ರ ಇರಬೇಕು. ಮುಂದಿನ ನಡೆ ಏನಿರಬೇಕು? ಅಹಿಂದ ವರ್ಗದ ನಿಲುವು ಏನಿರಬೇಕು? ಎಂಬ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
Laxmi News 24×7