ರಾಮನಗರ/ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿಗೆ ಜಾಲಿವುಡ್ ಆಡಳಿತ ಮಂಡಳಿ ಇಂದು ಭೇಟಿ ನೀಡಿ, ನೋಟಿಸ್ಗೆ ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶ ಕೇಳಿ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಯನ್ನು ಭೇಟಿಯಾಗಿರುವ ಜಾಲಿವುಡ್ ಆಡಳಿತ ಮಂಡಳಿ, ಜಾಲಿವುಡ್ ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದೆ. ಈ ರೀತಿ ಏಕಾಏಕಿ ಬಂದ್ ಮಾಡಿದ್ರೆ ಕಾರ್ಮಿಕರ ಕೆಲಸಕ್ಕೆ ಕುತ್ತು ಬರಲಿದೆ. ನಮ್ಮಿಂದ ತಪ್ಪಾಗಿದೆ. ತಪ್ಪು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೊಡಿ ಎಂದು ಮನವಿ ಸಲ್ಲಿಕೆ ಮಾಡಿದ್ದಾರೆ.
ಜಿಲ್ಲಾಧಿಕಾರಿ ಜೊತೆ ಜಾಲಿವುಡ್ ಆಡಳಿತ ಮಂಡಳಿ ಮಾತುಕತೆ ನಡೆಸುತ್ತಿದ್ದು, ಡಿಸಿ ಒಪ್ಪಿಕೊಂಡರೆ ಇಂದೇ ಬಿಗ್ ಬಾಸ್ ರಿಯಾಲಿಟಿ ಶೋ ರೀ-ಓಪನ್ ಆಗುವ ಸಾಧ್ಯತೆ ಇದೆ. ಷರತ್ತುಬದ್ಧ ಅನುಮತಿ ಸಿಗುವ ಸಾಧ್ಯತೆ ಇದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದ ಬೆನ್ನಲ್ಲೇ, ಜಿಲ್ಲಾಡಳಿತ ಬೀಗ ಮುದ್ರೆ ಹಾಕಿದೆ. ಜಾಲಿವುಡ್ ಆಡಳಿತ ಮಂಡಳಿ ಇಂದು ನ್ಯಾಯಾಲಯದಲ್ಲಿ ಜಿಲ್ಲಾಡಳಿತದ ಕ್ರಮದ ವಿರುದ್ಧ ತಡೆಯಾಜ್ಞೆಗೆ ಮುಂದಾಗಲಿದ್ದಾರೆ. ನ್ಯಾಯಾಲಯದಲ್ಲಿ ರಿಲೀಫ್ ದೊರೆತಲ್ಲಿ, ಒಂದೆರಡು ದಿನಗಳಲ್ಲಿ ಬಿಗ್ ಬಾಸ್ ಸೆಟ್ನಲ್ಲೇ ಕಾರ್ಯಕ್ರಮ ಮುಂದುವರಿಯಲಿದೆ. ಇಲ್ಲವಾದಲ್ಲಿ ಈ ಹಿಂದೆ ರಾಮೋಹಳ್ಳಿ ಬಳಿ ಹಾಕಿದ್ದ ಜಾಗದಲ್ಲಿ ಹೊಸದಾಗಿ ಸೆಟ್ ನಿರ್ಮಿಸಬೇಕಿದ್ದು, ಇದಕ್ಕೆ ಸಮಯಾವಕಾಶ ಬೇಕಾಗಿರುವ ಕಾರಣ ಸ್ವಲ್ಪ ತಡವಾಗಲಿದೆ ಎನ್ನಲಾಗುತ್ತಿದೆ.
ಸ್ಟುಡಿಯೋ ಸೀಜ್ ಆಗುತ್ತಿದ್ದಂತೆ ಸ್ಪರ್ಧಿಗಳನ್ನು ಕಾರುಗಳಲ್ಲಿ ಕರೆದುಕೊಂಡು ಹೋಗಿ ಬಿಡದಿ ಬಳಿಯ ರೆಸಾರ್ಟ್ನಲ್ಲಿ ಇರಿಸಿದ್ದಾರೆ. ಒಬ್ಬೊಬ್ಬರನ್ನು ಒಂದೊಂದು ದಿಕ್ಕಿನಲ್ಲಿ ಹೊರಗೆ ಕರೆದುಕೊಂಡು ಹೋದರು. ಸದ್ಯ ಎಲ್ಲಾ ಸ್ಪರ್ಧಿಗಳನ್ನು ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರು ರೆಸಾರ್ಟ್ ಒಂದರಲ್ಲಿ ಇರಿಸಿದ್ದಾರೆ.
Laxmi News 24×7