ಬೆಂಗಳೂರು: ರಾಜ್ಯದ ಒಂದು ವೃತ್ತದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗೆ ಡ್ರಗ್ಸ್ ಇನ್ಸ್ಪೆಕ್ಟರ್ ಎಂಬುದಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿದ ಬಳಿಕ, ಆ ಅಧಿಕಾರಿ ಮತ್ತೊಂದು ವೃತ್ತಕ್ಕೆ ವರ್ಗಾವಣೆಗೊಂಡರೂ ಅದೇ ಹುದ್ದೆ ಮುಂದುವರೆಯಲಿದ್ದು ಮತ್ತೆ ಹೊಸದಾಗಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಗದಗ ವೃತ್ತದ ಡ್ರಗ್ಸ್ ಇನ್ಸ್ಪೆಕ್ಟರ್ ಅವರು ತಮ್ಮ ವಿರುದ್ಧ ದಾಖಲಿಸಿರುವ ಖಾಸಗಿ ದೂರು ಮತ್ತು ಅದಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದುಕೋರಿ ಎಂ.ಎಸ್. ಕಡ್ಲಿ ಫಾರ್ಮಾದ ಮಾಲೀಕ ವಿಶ್ವನಾಥ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಸರ್ಕಾರ ಅಧಿಸೂಚನೆ ಹೊರಡಿಸಿ ಒಮ್ಮೆ ಡ್ರಗ್ಸ್ ಇನ್ಸ್ಪೆಕ್ಟರ್ ನೇಮಕ ಮಾಡಿದ ಬಳಿಕ ಅವರ ಅಧಿಕಾರಾವಧಿಯಲ್ಲಿನ ವರ್ಗಾವಣೆಯ ಬಳಿಕವೂ ಆ ಹುದ್ದೆ ಮುಂದುವರೆಯಲಿದೆ. ಅಲ್ಲದೇ, ವರ್ಗಾವಣೆಯಾದ ಪ್ರತಿ ಬಾರಿ ಅಧಿಕಾರಿಯನ್ನು ಡ್ರಗ್ ಇನ್ಸ್ಪೆಕ್ಟರ್ ಎಂದು ನಿಯೋಜಿಸಿರುವುದಾಗಿ ಹೊಸದಾಗಿ ಗೆಜೆಟ್ ಅಧಿಸೂಚನೆ ಹೊರಡಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ಸಹಾಯಕ ಔಷಧ ನಿಯಂತ್ರಕರು ಖಾಸಗಿ ದೂರು ದಾಖಲಿಸಿದ್ದಾರೆ. ಅವರು ಶಿವಮೊಗ್ಗ ವೃತ್ತದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅಂದರೆ 2011ರ ಜುಲೈ 16ರಂದು ಇನ್ಸ್ಪೆಕ್ಟರ್ ಆಗಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಬಳಿಕ ಗದಗ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ದೂರುದಾರರನ್ನು ಇನ್ಸ್ಪೆಕ್ಟರ್ರನ್ನಾಗಿ ಮತ್ತೊಮ್ಮೆ ಅಧಿಸೂಚನೆ ಹೊರಡಿಸುವ ಅಗತ್ಯ ಎದುರಾಗುವುದಿಲ್ಲ. ಆದ್ದರಿಂದ ಮತ್ತೊಂದು ಬಾರಿ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಅವರು ಖಾಸಗಿ ದೂರು ದಾಖಲಿಸಿ ವಿಚಾರಣೆ ನಡೆಸುವುದಕ್ಕೆ ಅವಕಾಶವಿಲ್ಲ ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಲಾಗುವುದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಜೊತೆಗೆ, ಸೆಷನ್ಸ್ ನ್ಯಾಯಾಲಯದಲ್ಲಿ ಮಾತ್ರ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂಬುದಾಗಿ ಅರ್ಜಿದಾರರ ವಾದ ಮಂಡಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಲ್ಲಿ ಮೊದಲು ದೂರು ದಾಖಲಾಗಿದ್ದು, ಬಳಿಕ ಸೆಷನ್ಸ್ ನ್ಯಾಯಾಧೀಶರಿಗೆ ವರ್ಗಾವಣೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
Laxmi News 24×7