ವಿಶ್ವಕರ್ಮ ಸಮುದಾಯವು ಕರಕುಶಲತೆಗೆ ಆಧಾರ ಸ್ತಂಭವಾಗಿದೆ: ಮಹಾಪೌರ ಜ್ಯೋತಿ ಪಾಟೀಲ.
– ವಿಶ್ವಕರ್ಮ ಸಮುದಾಯವು ಭಾರತೀಯ ಸಂಸ್ಕ್ರತಿಯ ಮತ್ತು ಕರಕುಶಲತೆಗೆ ಆಧಾರ ಸ್ತಂಭವಾಗಿದೆ.
ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಮರಗೆಲಸ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರ ಕೌಶಲ್ಯ ಮತ್ತು ಪರಿಣತಿಯು ಅನನ್ಯವಾದದ್ದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ ಅವರು ಹೇಳಿದರು.
ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಭಗವಾನ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತ ನಾವು ಕಾಣುವ ಅನೇಕ ಅದ್ಭುತ ಕಲಾಕೃತಿಗಳ ಹಿಂದೆ ವಿಶ್ವಕರ್ಮರ ಶ್ರಮ ಮತ್ತು ಕೌಶಲ್ಯ ಅಡಗಿದೆ.
ಆಧುನಿಕ ಯುಗದಲ್ಲಿಯೂ ವಿಶ್ವಕರ್ಮ ಸಮುದಾಯವು ತಮ್ಮ ಸಾಂಪ್ರದಾಯಿಕ ಕೌಶಲ್ಯಗಳನ್ನು ಉಳಿಸಿಕೊಂಡು ಬಂದಿದೆ. ಜೊತೆಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸಮಕಾಲೀನ ಸಮಾಜದ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ವೃತ್ತಿಗಳನ್ನು ಮುಂದುವರೆಸುತ್ತಿದ್ದಾರೆ.
ಸಮಾಜದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ಕೌಶಲ್ಯ ಮತ್ತು ಜ್ಞಾನವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಬಡಗಿಯರ ಕಲೆಯ ಮೇಲೆ ಅವಲಂಬಿತರಾಗಿದ್ದಾರೆ. ಕೇವಲ ಮರದಿಂದ ವಸ್ತುಗಳನ್ನು ತಯಾರಿಸುವುದಿಲ್ಲ,
ಬದಲಾಗಿ ಪ್ರತಿಯೊಬ್ಬರು ಮನೆ ಕಟ್ಟುವ ಕನಸುಗಳನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಕೌಶಲ್ಯ, ಶ್ರಮ ಮತ್ತು ಸೃಜನಶೀಲತೆ ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
Laxmi News 24×7