ಕಳ್ಳರಿಂದ 2 ಕೆ.ಜಿ ಬಂಗಾರ ಜಪ್ತಿ ಮಾಡಿ, 250 ಗ್ರಾಂ ಲೆಕ್ಕ ತೋರಿಸಿದ ಪೊಲೀಸಪ್ಪನ ವಿರುದ್ಧ ಐಜಿಪಿಗೆ ದೂರು!
ಬೆಂಗಳೂರು (ಸೆ.11): ಕಳ್ಳತನ ಪ್ರಕರಣಗಳ ತನಿಖೆ ವೇಳೆ ಕಳ್ಳರಿಂದ ವಶಪಡಿಸಿಕೊಂಡಿದ್ದ ಚಿನ್ನವನ್ನು ಕದ್ದ ಆರೋಪದ ಮೇಲೆ ಸೂರ್ಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ಮತ್ತು ಅವರ ಕ್ರೈಂ ಸಿಬ್ಬಂದಿ ವಿರುದ್ಧ ಕೇಂದ್ರ ವಲಯ ಐಜಿಪಿ ಲಾಬೂರಾಮ್ ಅವರಿಗೆ ದೂರು ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ವೆಂಕಟಾಚಲಪತಿ ಈ ಗಂಭೀರ ಆರೋಪವನ್ನು ಮಾಡಿದ್ದಾರೆ.
ಪ್ರಕರಣದ ವಿವರ:
ಕಳೆದ ಐದು-ಆರು ತಿಂಗಳುಗಳಲ್ಲಿ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸೂರ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಕೃತ್ಯಗಳನ್ನು ಒಂದೇ ತಂಡ ಎಸಗಿದೆ ಎಂದು ತಿಳಿದುಬಂದಿತ್ತು. ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಸಂಜೀವ್ ಮಹಾಜನ್ ಮತ್ತು ತಂಡ, ಪ್ರಕರಣಕ್ಕೆ ಸಂಬಂಧಿಸಿದ ಮಾರ್ವಾಡಿಗಳನ್ನು ವಶಕ್ಕೆ ಪಡೆದು ಖಾಸಗಿ ಲಾಡ್ಜ್ವೊಂದರಲ್ಲಿ ಕೂಡಿಹಾಕಿ ಚಿನ್ನವನ್ನು ರಿಕವರಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ಸ್ಪೆಕ್ಟರ್, ಕ್ರೈಂ ಸಿಬ್ಬಂದಿ ಬಂಗಾರ ಹಂಚಿಕೊಂಡರಾ?
ಆದರೆ, ಕಳ್ಳರಿಂದ ವಶಪಡಿಸಿಕೊಂಡಿದ್ದ ಚಿನ್ನದ ಪ್ರಮಾಣ ಮತ್ತು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಚಿನ್ನದ ಪ್ರಮಾಣದಲ್ಲಿ ದೊಡ್ಡ ವ್ಯತ್ಯಾಸವಿರುವ ಬಗ್ಗೆ ದೂರುದಾರರು ಆರೋಪಿಸಿದ್ದಾರೆ. ಸುಮಾರು 2 ಕೆ.ಜಿ.ಯಷ್ಟು ಚಿನ್ನಾಭರಣಗಳನ್ನು ರಿಕವರಿ ಮಾಡಲಾಗಿದ್ದರೂ, ದಾಖಲೆಗಳಲ್ಲಿ ಕೇವಲ 250 ಗ್ರಾಂ ಚಿನ್ನ ಮಾತ್ರ ತೋರಿಸಲಾಗಿದೆ. ಉಳಿದ ಚಿನ್ನವನ್ನು ಇನ್ಸ್ಪೆಕ್ಟರ್ ಮತ್ತು ಕ್ರೈಂ ಸಿಬ್ಬಂದಿ ಪರಸ್ಪರ ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಕಳ್ಳತನದ ಮಾಲು ಪಡೆದಿದ್ದ ಆರೋಪಿಗಳಿಂದ ಲಂಚದ ರೂಪದಲ್ಲಿ ಹಣವನ್ನೂ ಪಡೆದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
Laxmi News 24×7