ಮೈಸೂರು: ರಾಜ್ಯದಲ್ಲಿ ಅತಿ ಕಿರಿಯ ವಯಸ್ಸಿನವರು, ಯುವಕರು ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಈ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿದ್ದು, ಮುಂಜಾಗ್ರತ ಕ್ರಮವಾಗಿ ಪರೀಕ್ಷೆಗಾಗಿ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ನಗರದ ಸರ್ಕಾರಿ ಜಯದೇವ ಹೃದ್ರೋಗ ಆಸ್ಪತ್ರೆಯ ಬಳಿ ಸಾವಿರಾರು ಜನರು ಜಮಾಯಿಸಿದ್ದು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹೈರಾಣಾಗಿದ್ದಾರೆ.
ಜನರು ಪ್ಯಾನಿಕ್ ಆಗಬೇಡಿ ಎಂಬ ವೈದ್ಯರ ಸಲಹೆ ಒಂದೆಡೆಯಾದರೆ, ಪರೀಕ್ಷೆಗಾಗಿ ಬಂದ ಜನರು ಹೇಳುವುದೇನು? ಇದರ ಪ್ರತ್ಯಕ್ಷ ವರದಿ ಇಲ್ಲಿದೆ.
ಯುವಕರೇ ಹೆಚ್ಚು: ಪ್ರತಿದಿನ ಬೆಳಗಿನಜಾವವೇ ಹಾಸನ, ಮಂಡ್ಯ, ಮೈಸೂರು ಜಿಲ್ಲೆ ಹಾಗೂ ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವು ಕಡೆಗಳಿಂದ ಹೃದಯ ಪರೀಕ್ಷೆಗಾಗಿ ಜನರು ಆಸ್ಪತ್ರೆ ಮುಂದೆ ಜಮಾಯಿಸುತ್ತಿದ್ದಾರೆ. ಸಣ್ಣ ವಯಸ್ಸಿನ ಯುವಕರಿಂದ ಹಿಡಿದು ಹಿರಿಯ ವಯಸ್ಸಿನ ವ್ಯಕ್ತಿಗಳು ಹಾಗೂ ಮಹಿಳೆಯರು ಜಯದೇವ ಆಸ್ಪತ್ರೆಗೆ ಹಾರ್ಟ್ ಚೆಕ್ಅಪ್ಗಾಗಿ ಬರುತ್ತಿದ್ದಾರೆ. ತಪಾಸಣೆಗೆ ಬರುತ್ತಿರುವವರ ಸಂಖ್ಯೆ ಸಾವಿರಕ್ಕೂ ಹೆಚ್ಚಾಗಿದ್ದು, ಅದರಲ್ಲಿ ಯುವಕರೇ ಹೆಚ್ಚಾಗಿದ್ದಾರೆ. ಪರೀಕ್ಷೆ ನಂತರ ಯಾವುದೇ ರೋಗ ಲಕ್ಷಣಗಳು ಇಲ್ಲದೆ ವಾಪಸಾಗುತ್ತಿದ್ದಾರೆ.
ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಸದಾನಂದ ಹೀಗಂತಾರೆ: “ಹಾಸನದಲ್ಲಿ ಸಣ್ಣ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ವರದಿಯನ್ನು ನೋಡಿ ಸಾವಿರಾರು ಜನ ನಮ್ಮ ಆಸ್ಪತ್ರೆಗೆ ಪರೀಕ್ಷೆಗಾಗಿ ಬರುತ್ತಿದ್ದಾರೆ. ಈ ಮೊದಲು ಒಪಿಡಿಯಲ್ಲಿ 450 ರಿಂದ 650 ಜನರನ್ನು ನೋಡಲಾಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ಸಾವಿರಕ್ಕೂ ಹೆಚ್ಚು ಜನ ಬರುತ್ತಿದ್ದಾರೆ. ಬಹಳ ಜನಕ್ಕೆ ಯಾವುದೇ ಹೃದಯ ಸಮಸ್ಯೆ ಇರುವುದಿಲ್ಲ. ತುಂಬಾ ಜನ ಏನಾಗುತ್ತೋ ಎನ್ನುವ ಭಯದಿಂದಲೇ ಬರುತ್ತಿದ್ದಾರೆ” ಎಂದು ಹೇಳಿದರು.
Laxmi News 24×7