ಬೆಂಗಳೂರು: “ಕಾರು ಓವರ್ ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದರು.
ಈ ರೋಡ್ ರೋಜ್ ಘಟನೆ ಕುರಿತು ಡಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಗಡೆ ಅವರ ಗನ್ ಮ್ಯಾನ್ ಮತ್ತು ಚಾಲಕನನ್ನು ಬಂಧಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅನಂತ್ ಕುಮಾರ್ ಹೆಗಡೆ ಅವರಿಗೆ ನೋಟಿಸ್ ನೀಡಲಾಗಿದೆ” ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ನೆಲಮಂಗಲ ತಾಲೂಕು ಹಳೇ ನಿಜಗಲ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ 3:40ರ ಸುಮಾರಿಗೆ ತಮ್ಮ ಕಾರನ್ನು ಓವರ್ ಟೇಕ್ ಮಾಡಿದ ವಿಚಾರಕ್ಕೆ ಅನಂತ್ ಕುಮಾರ್ ಹೆಗಡೆ, ಅವರ ಗನ್ ಮ್ಯಾನ್ ಮತ್ತು ಡ್ರೈವರ್ ಸೇರಿದಂತೆ ನಾಲ್ವರು ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ಸೈಫ್ ಖಾನ್ ಎಂಬವರು ಡಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
“ತುಮಕೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿ ಹೇಳಿಕೆ ಪಡೆಯಲಾಗಿದೆ. ಗನ್ ಮ್ಯಾನ್ ಮತ್ತು ಚಾಲಕನ ಬಂಧನವಾಗಿದೆ. ಆರೋಪಿಗಳು ಕಾರವಾರದವರು. ಘಟನೆಗೆ ಸಂಬಂಧಿಸಿದ ಯಾರನ್ನೂ ಬಿಡುವ ಪ್ರಶ್ನೆ ಇಲ್ಲ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದೇವೆ. ಕಾನೂನು ಪ್ರಕಾರ ತನಿಖೆ ನಡೆಸುತ್ತೇವೆ. ಅವರು ತನಿಖೆಗೆ ಸಹಕರಿಸಬೇಕು ಅಷ್ಟೇ” ಎಂದು ಸಿ.ಕೆ.ಬಾಬಾ ಹೇಳಿದರು.