ಬೆಂಗಳೂರು : ಪೌರಾಡಳಿತ ಅಧ್ಯಯನಕ್ಕೆಂದು ಇಸ್ರೇಲ್ ಪ್ರವಾಸಕ್ಕೆ ರಾಜ್ಯದಿಂದ ತೆರಳಿದ್ದ 18 ಜನರ ತಂಡ ರಾಜ್ಯಕ್ಕೆ ಗುರುವಾರ ಹಿಂದಿರುಗಿದೆ.
ಇಸ್ರೇಲ್ ದೇಶದಲ್ಲಿ ಪೌರಾಡಳಿತ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವುದಕ್ಕಾಗಿ ರಾಜ್ಯದಿಂದ ಬಿ ಪ್ಯಾಕ್ ತಂಡದಲ್ಲಿ 18 ಜನರು ತೆರಳಿದ್ದರು. ಇರಾನ್ -ಇಸ್ರೇಲ್ ದೇಶಗಳ ನಡುವೆ ಕಳೆದ ಕೆಲ ದಿನಗಳಿಂದ ಭೀಕರ ಯುದ್ಧ ನಡೆಯುತ್ತಿದೆ. ಈ ಮಧ್ಯೆ ಇಸ್ರೇಲ್ನಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಇಸ್ರೇಲ್ ನಿಂದ ಕುವೈತ್, ಕುವೈತ್ನಿಂದ ಮುಂಬೈ ಮಾರ್ಗವಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರನ್ನು ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಲಾಯಿತು.
ತಂಡದ ಸದಸ್ಯರಲ್ಲಿ ಒಬ್ಬರಾಗಿದ್ದ ಕಾಂಗ್ರೆಸ್ ವಕ್ತಾರರಾದ ನಟರಾಜ್ ಗೌಡ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು. ಅಧ್ಯಯನಕ್ಕೆಂದು ಜೂನ್ 7 ರಂದು ನಮ್ಮ ತಂಡದವರು ಇಸ್ರೇಲ್ ಗೆ ತೆರಳಿದ್ದೆವು. ಅಧ್ಯಯನ ಎಲ್ಲಾ ಮುಗಿಸಿ ವಾಪಸ್ ಬರಬೇಕು ಎಂದುಕೊಂಡಾಗ ಯುದ್ದ ಪ್ರಾರಂಭವಾಯಿತು. ಯುದ್ದದ ಭೀಕರತೆ ಜೋರಾಗಿತ್ತು. ಕ್ಷಿಪಣಿ ದಾಳಿ ಪ್ರಾರಂಭವಾದಾಗ ನಾವು ಬಂಕರ್ ನಲ್ಲಿ ಅಶ್ರಯ ಪಡೆದವು. ಅಲ್ಲಿ ಬಿಸ್ಕತ್ತು, ಕುಡಿಯುವ ನೀರಿನ ವ್ಯವಸ್ಥೆಯನ್ನ ಅಲ್ಲಿನ ಸರ್ಕಾರ ಮಾಡಿತು. ನಮ್ಮ ಜೊತೆಯಲ್ಲಿ ಅಲ್ಲಿನ ಜನಪ್ರತಿನಿಧಿ ಇದ್ದರು.
ರಾತ್ರಿ ಯುದ್ಧ ನಡೆದು, ಬೆಳಗ್ಗೆ ಎದ್ದು ನೋಡಿದರೆ ಸ್ಥಳ ಗುರುತು ಸಿಗುತ್ತಿರಲಿಲ್ಲ. ಕೊನೆಗೆ ಸರ್ಕಾರದ ಶ್ರಮದಿಂದ ನಮಗೆ ಯಾವುದೇ ತೊಂದರೆ ಆಗದಂತೆ ವಾಪಸ್ ಆಗಿದ್ದೇವೆ. ವಾಪಸ್ ಬೆಂಗಳೂರಿಗೆ ಬಂದಿದ್ದು ಬಹಳ ಸಂತೋಷವಾಯಿತು ಎಂದರು.