ಬಾಗಲಕೋಟೆ, ಮೇ 22: ಪ್ರತಿಯೊಬ್ಬರ ಜೀವನದಲ್ಲಿ ಮದುವೆ, ಗಂಡ (Husband) ಮತ್ತು ಮಕ್ಕಳು ಬಹಳ ಪ್ರಮುಖವಾದ ಪಾತ್ರವಹಿಸುತ್ತದೆ. ನೂರಾರು ಸುಂದರ ಕನಸುಗಳನ್ನು ಕಂಡು ಹಲವರು ಮದುವೆಯಾಗತ್ತಾರೆ. ಹೆಂಡತಿಗೆ (wife) ಗಂಡನೇ ಎಲ್ಲಾ, ಆತನೇ ಪ್ರಪಂಚ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಆತ ನಾಪತ್ತೆ ಆದರೆ ಹೆಂಡತಿಯ ಗತಿಯೇನು? ಇಂತಹದ್ದೆ ಒಂದು ಘಟನೆ ಇದೀಗ ಜಿಲ್ಲೆಯಲ್ಲಿ ನಡೆದಿದೆ. ಮದುವೆಯಾಗಿ ಕೇವಲ ಎರಡು ತಿಂಗಳಿಗೆ ಮನೆಯಿಂದ ಹೋದ ಆಕೆಯ ಗಂಡ ತಿರುಗಿ ಬರಲೇ ಇಲ್ಲ. ಗಂಡ ನಾಪತ್ತೆಯಿಂದ ಶಾಕ್ಗೆ ಒಳಗಾಗಿರುವ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪರಿಣಾಮ ಅವರನ್ನು ಬರೊಬ್ಬರಿ ಏಳು ವರ್ಷದಿಂದ ದನದ ಕೊಟ್ಟಿಗೆಯಲ್ಲಿ ಹಗ್ಗ ಕಟ್ಟಿ ಗೃಹಬಂಧನದಲ್ಲಿ ಇರಿಸಲಾಗಿದೆ. ಸದ್ಯ ಯುವತಿಯ ಸ್ಥಿತಿ ನೋಡಿದರೆ ಎಂತವರ ಕಣ್ಣಲ್ಲೂ ನೀರು ತರಿಸುತ್ತಿದೆ.
ಈ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ವಡಗೇರಿ ಗ್ರಾಮದಲ್ಲಿ ಕಂಡುಬಂದಿದೆ. ಮಹಿಳೆಯ ಸ್ಥಿತಿ ನೋಡಿದರೆ ಎಂತವರ ಮನ ಕಲುಕುತ್ತದೆ. ಅಯ್ಯೋ ಪಾಪ ಎಂದು ಎಲ್ಲರೂ ಮರುಗುತ್ತಾರೆ. ಆ ಮಹಿಳೆಯ ಹೆಸರು ಶಂಕ್ರವ್ವ ಸೇಬಿನಕಟ್ಟಿ (26). ಕಳೆದ ಏಳು ವರ್ಷದಿಂದ ಈಕೆಯನ್ನು ಗೃಹಬಂಧನದಲ್ಲಿ ಇಡಲಾಗಿದೆ. ಈಕೆಯ ಈ ಸ್ಥಿತಿಗೆ ಕಾರಣ ಪತಿ ನಾಪತ್ತೆಯಾಗಿರುವುದು.
ಮದುವೆಯಾಗಿ ಎರಡೇ ತಿಂಗಳಿಗೆ ಮನೆಬಿಟ್ಟು ಹೋದ ಗಂಡ
ವಡಗೇರಿ ಗ್ರಾಮದ ಶಂಕ್ರವ್ವ ಹಾಗೂ ಗೂಡೂರು ಗ್ರಾಮದ ಪಿಡ್ಡಪ್ಪರ ಮದುವೆ 2018 ಫೆಬ್ರುವರಿ 14 ಪ್ರೇಮಿಗಳ ದಿನದಂದು ನಡೆದಿತ್ತು. ನವಜೋಡಿಗಳು ಸಂಭ್ರಮದಿಂದ ಸುಂದರ ಸಂಸಾರಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದ ಎರಡು ತಿಂಗಳ ನಂತರ ಅದೊಂದು ದಿನ ಬೆಳಿಗ್ಗೆ ಮನೆಯಿಂದ ಹೋದ ಪಿಡ್ಡಪ್ಪ ಇಂದಿಗೂ ವಾಪಸ್ ಬಂದಿಲ್ಲ. ಬದುಕಿದ್ದಾರಾ ಅಥವಾ ಮೃತಪಟ್ಟಿದ್ದಾರಾ ಅನ್ನೋದು ಗೊತ್ತಿಲ್ಲ. ಯಾವಾಗ ಗಂಡ ವಾಪಸ್ ಬರಲಿಲ್ಲವೊ, ಗಂಡನ ಮೇಲೆ ಅಪಾರ ಪ್ರೀತಿ ಇಟ್ಕೊಂಡಿದ್ದ ಶಂಕ್ರವ್ವ ಶಾಕ್ಗೆ ಒಳಗಾಗಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಏಳು ವರ್ಷದಿಂದ ಮಾನಸಿಕತೆಯಿಂದ ಬಳಲುತ್ತಿದ್ದಾರೆ.