“ಚಿಕ್ಕಬಾಗೇವಾಡಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು
ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಚಿಕ್ಕಬಾಗೇವಾಡಿ ಗ್ರಾಮದ ಬಳಿ ಎರಡು ಕಾರುಗಳ ಮಧ್ಯೆಭೀಕರ ಆಫಘಾತ ಸಂಭವಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಿರೇಬಾಗೇವಾಡಿ ಗ್ರಾಮದ ನಿವಾಸಿ ಅನಿಸ್ ಮುಸ್ತಾಕ ಸೈಯದ್ (ಕಾರ್ ಚಾಲಕ– 30), ಇವರ ಪತ್ನಿ ಅಯಿಮಾನ ಅನಿಸ್ ಸೈಯದ್ (24) ಇವರಿಬ್ಬರ ಮಗು ಅಹ್ಮದ್ ಅನಿಸ್ ಸೈಯದ್ (1.5) ಮೃತಪಟ್ಟವರು. ಅನಿಸ್ ಅವರ ಹಸೋದರಿ ಆಯಿಷಾ ಅನ್ವರ ಸೈಯದ್ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಐವರು ಗೋಕಾಕದಿಂದ ಹಿರೇಬಾಗೇವಾಡಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರ ಓವರ್ ಟ್ಯಾಕ್ ಮಾಡಲು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಡಿಕ್ಕಿ ಹೊಡೆದ ಕಾರಿನಲ್ಲಿ ಸವದತ್ತಿ ಪರಸಗಡ ಕ್ಷೇತ್ರದ ಮಾಜಿ ಶಾಸಕ ಆರ್.ವಿ. ಪಾಟೀಲ ಅವರ ಕಾರು ಎಂದು ತಿಳಿದು ಬಂದಿದೆ. ಇದರಲ್ಲಿದ್ದ ಮಾಜಿ ಶಾಸಕರ ಪುತ್ರ ಹಾಗೂ ಇನ್ನೊಬ್ಬ ಪ್ರಯಾಣಿಕನಿಗೂ ಗಾಯಗಳಾಗಿವೆ.
ಡಿಕ್ಕಿ ರಭಸಕ್ಕೆ ಅನಿಸ್ ಅವರ ಕಾರು ದೂರ ಚಿಮ್ಮಿ ರಸ್ತೆ ಬದಿಯ ಹೊಲದಲ್ಲಿ ಬಿದ್ದಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಧಾವಿಸಿದ ಜನ ಶವಗಳನ್ನು ಹೊರತೆಗೆಯಲು ಸಹಕರಿಸಿದರು. ಹಿರೇಬಾಗೇವಾಡಿ ಮತ್ತು ಬೈಲಹೊಂಗಲ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.”