ಧಾರವಾಡ: ಉತ್ತರ ಕರ್ನಾಟಕದಲ್ಲಿ ಜಾತ್ರಾ ಸಂಭ್ರಮವಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಗ್ರಾಮದೇವಿಯರ ಜಾತ್ರೆಗಳು ಅದ್ಧೂರಿಯಾಗಿ ನಡೆಯುತ್ತಿವೆ. ಧಾರವಾಡದ ತಾಲೂಕಿನ ಯಾದವಾಡ ಗ್ರಾಮದಲ್ಲಿ 21 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದೆ. ಗ್ರಾಮದೇವತೆಗಳ ಜಾತ್ರೋತ್ಸವದ ಸಂಭ್ರಮ ಮನೆಮಾಡಿದ್ದು, ಇಂದು ಬೀದಿಬೀದಿಗಳಲ್ಲಿ ನಡೆದ ಹೊನ್ನಾಟ ಇಡೀ ಗ್ರಾಮವನ್ನೇ ಭಂಡಾರಮಯಗೊಳಿಸಿತು.
ಯಾವುದೇ ರೀತಿಯ ಭೇದಭಾವವಿಲ್ಲದೆ ಗ್ರಾಮಸ್ಥರೆಲ್ಲರೂ ಸಡಗರದಲ್ಲಿ ಪಾಲ್ಗೊಂಡು ಗಮನ ಸೆಳೆದರು. 21 ವರ್ಷಗಳ ಗ್ರಾಮದೇವತೆಗಳಾದ ದ್ಯಾಮವ್ವ-ದುರ್ಗವ್ವ ದೇವತೆಗಳ ಜಾತ್ರೆ ನಡೆಯುತ್ತಿರುವುದರಿಂದ ಗ್ರಾಮದಲ್ಲಿ ವಿಶೇಷ ಸಂಭ್ರಮ ಕಾಣಿಸಿಕೊಂಡಿದೆ. ಜಾತ್ರೆ ನಿಮಿತ್ತ ಮೂರು ದಿನಗಳ ಕಾಲ ಹೊನ್ನಾಟ ನಡೆಯುತ್ತಿದ್ದು, ಇದಕ್ಕೆ ಶನಿವಾರ ಚಾಲನೆ ಸಿಕ್ಕಿದೆ.
ಅದರಂತೆ ಇಂದು ಕೂಡ ಗ್ರಾಮದೇವಿಯರ ಮೂರ್ತಿ ಮೆರವಣಿಗೆ ಹೊರಟಾಗ ಜನ ಭಂಡಾರ, ಹೂವುಗಳನ್ನು ತೂರಿ ಸ್ವಾಗತಿಸಿದರು, ಸಂಭ್ರಮಿಸಿದರು.
ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಸಂಕೇತವಾಗಿ ಹೊನ್ನಾಟ ಆಡಲಾಗುತ್ತದೆ. ವಿರಾಟ ರೂಪ ತಾಳಿದ ದೇವಿಯು ರಥಿಕಳಾಗಿ ದುಷ್ಟಶಕ್ತಿಗಳನ್ನು ನಿಗ್ರಹಿಸಲು ದುರ್ಗಿ ರೂಪಿಣಿಯಾದ ದೇವಿಯನ್ನು ಹೆಗಲ ಮೇಲೆ ಹೊತ್ತು ಭಕ್ತರು ಬಡಾವಣೆಗಳಲ್ಲಿ ಸಾಗುವುದು ವಾಡಿಕೆ. ದೇವಿ ರಾಕ್ಷರ ರಕ್ತ ಚಿಮ್ಮಿಸುವ ಸಂಕೇತವೇ ಕುಂಕುಮ-ಭಂಡಾರ ಹಾರಿಸುವಿಕೆಯಾಗಿದೆ.