ಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ರಾಜ್ಯ ಬಿಜೆಪಿ ಏಪ್ರಿಲ್ 2ರಿಂದ ಫ್ರೀಡಂ ಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ಬೆಲೆ ಏರಿಕೆ ಆಗುತ್ತಿದೆ. ದೇಶದಲ್ಲಿ ಅತ್ಯಂತ ದುಬಾರಿ ಜೀವನ ನಡೆಸುವ ದುಃಸ್ಥಿತಿ ನಾಡಿನ ಜನರಿಗೆ ಬಂದಿದೆ. ಉಸಿರಾಡುವ ಗಾಳಿಯೊಂದನ್ನು ಬಿಟ್ಟು ಉಳಿದೆಲ್ಲವುಗಳ ಬೆಲೆ ಏರಿಕೆ ಮಾಡಲಾಗಿದೆ. ಅಧಿಕಾರ ನೀಡಿದ ಮತದಾರರಿಗೆ ಈ ಸರ್ಕಾರ ಶಾಪಗ್ರಸ್ಥವಾಗಿದೆ. ವಿದ್ಯುತ್ ಯೂನಿಟ್ಗೆ 36 ಪೈಸೆ, ಹಾಲಿನ ದರ ಮೂರು ಬಾರಿ ಹೆಚ್ಚಳ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲೂ ದರ ಏರಿಕೆಯಾಗಿದೆ. ಮುದ್ರಾಂಕ ಶುಲ್ಕ, ಆಫಿಡೆವಿಟ್, ಕ್ಯಾನ್ಸ್ಲೇಷನ್ ಡೀಡ್, ಮಾರ್ಟ್ಗೇಜ್, ವೃತ್ತಿಪರ ತೆರಿಗೆ ಎಲ್ಲವೂ ಏರಿಕೆಯಾಗಿದೆ. ಬಿತ್ತನೆ ಬೀಜ, ಬಸ್ ದರ, ನೀರಿನ ಸುಂಕ ಹಾಗೂ ಪೆಟ್ರೋಲ್ ದರ ಏರಿಕೆಯಾಗಿದೆ ಎಂದು ಕಿಡಿಕಾರಿದರು.
ಅಧಿಕಾರಿ ನೀಡಿದ ಮತದಾರರಿಗೆ ಶಾಪ ನೀಡುವ ಸರ್ಕಾರ ಇದಾಗಿದೆ. ಬಡವರಿಗೆ ಬರೆ ಎಳೆಯುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಏಪ್ರಿಲ್ 2ರಂದು ಫ್ರೀಡಂ ಪಾರ್ಕ್ನಲ್ಲಿ ಬೆಳಗ್ಗೆ 11 ಗಂಟೆಗೆ ಅಹೋರಾತ್ರಿ ಧರಣಿ ಆರಂಭಿಸಲಿದ್ದೇವೆ. ಪಕ್ಷದ ಎಲ್ಲ ಜನಪ್ರತಿನಿಧಿಗಳು, ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಧರಣಿ ಮುಂದುವರಿಕೆಗೆ ಅಂದೇ ತೀರ್ಮಾನಿಸುತ್ತೇವೆ. ಏಪ್ರಿಲ್ 5ರಂದು ಜಿಲ್ಲೆ ಹಾಗೂ ಮಂಡಳಗಳಲ್ಲಿ ಹೋರಾಟ ನಡೆಸುತ್ತೇವೆ ಎಂದರು.
Laxmi News 24×7