ಆನೇಕಲ್(ಬೆಂಗಳೂರು): ಎರಡೆರಡು ಮದುವೆಯಾಗಿದ್ದ ಪತಿ ಓರ್ವ ಪತ್ನಿಯ ಶೀಲ ಶಂಕಿಸಿ ಆಕೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ರಾಚಾಮಾನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಅನಿತಾ (29) ಮೃತ ಮಹಿಳೆ. ಬಾಬು (32) ಪತ್ನಿ ಕೊಂದ ಹಂತಕ.
ಘಟನೆಯ ವಿವರ: 9 ವರ್ಷಗಳ ಹಿಂದೆ ಬಾಬು ಇಬ್ಬರು ಯುವತಿಯರನ್ನು ಪ್ರೀತಿಸಿ, ಒಂದೇ ದಿನ ಇಬ್ಬರಿಗೂ ತಾಳಿ ಕಟ್ಟಿದ್ದ. ಈ ಪೈಕಿ ಓರ್ವ ಪತ್ನಿ ಅನಿತಾ ಮೈಸೂರಿನ ಚಿಕ್ಕ ಮಾರ್ಕೆಟ್ನವರು. ಪತಿ ತನ್ನ ಮೇಲೆ ದಿನನಿತ್ಯ ಅನುಮಾನ ವ್ಯಕ್ತಪಡಿಸುತ್ತಿದ್ದುದರಿಂದ ಆತನೊಂದಿಗೆ ಜಗಳವಾಡಿ ನೊಂದು ಒಂದು ತಿಂಗಳು ಮನೆ ಬಿಟ್ಟಿದ್ದರು. ಕಳೆದ ವಾರ ಬಾಬು ಕುಟುಂಬಸ್ಥರು ಆಕೆಯ ಮನವೊಲಿಸಿ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದರಂತೆ.
ಆದರೆ, ಮತ್ತದೇ ಕ್ಯಾತೆ ತೆಗೆದ ಬಾಬು, ಅನಿತಾ ಜೊತೆ ಸೋಮವಾರ ರಾತ್ರಿ ಜಗಳ ಮಾಡಿದ್ದಾನೆ. ಈ ವೇಳೆ ಹಿಟ್ಟಿನ ದೊಣ್ಣೆ ಮತ್ತು ಕೈಯಿಂದ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅನಿತಾ ರಾತ್ರಿ ನಿದ್ರಿಸುತ್ತಾ ಬೆಳಗಾಗುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಕ್ಸ್ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಬಾಬು ಅತ್ತಿಬೆಲೆ ಪೊಲೀಸರ ವಶದಲ್ಲಿದ್ದಾನೆ.
Laxmi News 24×7