ಬೆಳಗಾವಿ : ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಣ್ಣ ಪುಟ್ಟ ಪ್ರತಿಷ್ಠೆ. ಇದನ್ನು ಸರಿಪಡಿಸಿಕೊಂಡರೆ ಒಳ್ಳೆಯದಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ನಾಯಕರು ಸಾರ್ವಕನಿಕರವಾಗಿ ಮಾತನಾಡಿದರೆ ಯಾವುದೇ ಉಪಯೋಗ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಹಿರಂಗವಾಗಿ ಪಕ್ಷದ ಬಗ್ಗೆ ಮಾತನಾಡದಂತೆ ಸೂಚಿಸಿದರೂ ವೈಯಕ್ತಿಕ ಪ್ರತಿಷ್ಠೆಗಾಗಿ ಕೆಲವರು ಮಾತನಾಡುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಪ್ರಶ್ನೆಯೇ ಇಲ್ಲ. ಅದರ ಬಗ್ಗೆ ಚರ್ಚೆಯಾಗಬಾರದು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಕೊಡುತ್ತಿದ್ದೇವೆ. ಕೆಲವರಿಗೆ ಆಸೆ ಆಕಾಂಕ್ಷಿಗಳು ಇರುತ್ತದೆ. ಹಲವಾರು ಕಾರಣಗಳಿಂದ ಸಿಎಂ ಆಗುತ್ತಾರೆ. 30 ಜನ ಸಚಿವರಾಗಬಹುದು. ಸಿಎಂ ಮಾತ್ರ ಒಬ್ಬರೇ ಅದನ್ನ ನಾವು ಅಷ್ಟು ಸುಲಭವಾಗಿ ಆಗುತ್ತದೆ ಎಂದು ಹೇಳಲು ಆಗದು. ಎಲ್ಲರೂ ಕೂಡಿ ಒಮ್ಮತವಾಗಿ ಆಯ್ಕೆ ಮಾಡುವ ನಿರ್ಣಯ. ಈಗ ಒಬ್ಬರು ಸಿಎಂ ಇದ್ದಾರೆ. ಅದರ ಬಗ್ಗೆ ಚರ್ಚೆ ಮಾಡುವುದು ಅನಗತ್ಯ ವಿಷಯ ಎಂದರು.
ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾವಾಗ ಮಾಡಬೇಕೆಂದು ಅವಾಗ ಮಾಡುತ್ತಾರೆ ಎಂದರು.ಪ್ರಕಾಶ ಹುಕ್ಕೇರಿ ಹಿರಿಯರಿದ್ದಾರೆ. ಅವರಿಗೆ ಸಿಎಂ ಸ್ಥಾನ ಸಿಗಬೇಕಿತ್ತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾಮಥ್ರ್ಯ ಬಹಳಷ್ಟು ಜನರಿಗೆ ಇರುತ್ತದೆ. ಸಿಎಂ ಆಗುವುದು ಒಬ್ಬರೇ ತಾನೆ ಎಂದರು.ಕಾಂಗ್ರೆಸ್ ನಲ್ಲಿ ಬಣಗಳು ಇಲ್ಲ. ಪ್ರತಿಷ್ಠೆ ಇದೆ. ಬಿಜೆಪಿಯಲ್ಲಿ ಪ್ರತಿಷ್ಠೆ ಹಾಗೂ ಬಣ ಜೊತೆಗೆ ದೊಡ್ಡ ಬಿರುಕು ಮೂಡಿದೆ. ನಮ್ಮಲ್ಲಿ ಎಲ್ಲ ಶಾಸಕರು, ಕಾರ್ಯಕರ್ತರು ಎಲ್ಲರೂ ಸರಿಯಾಗಿ ಆರೋಗ್ಯಕರವಾಗಿದ್ದೇವೆ. ನಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ ಎಂದರು.