ವಿಜಯಪುರ, (ಫೆಬ್ರವರಿ 12): ವಿಜಯಪುರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಕೊಲೆ ನಡೆದಿದೆ. ಆಟೋದಲ್ಲಿ ಬಂದಿದ್ದ ನಾಲ್ಕೈದು ದಾಳಿಕೋರರು, ಪಕ್ಕಾ ಪ್ಲ್ಯಾನ್ ಮಾಡಿ ಮಾರಕಾಸ್ತ್ರಗಳಿಂದ ಬಾಗಪ್ಪನ ತಲೆ, ಕೈಗೆ ಹಲ್ಲೆಗೈದು, ಎಡಗೈ ಮತ್ತು ಮುಂಗೈ ಕತ್ತರಿಸಿ ಸಂಬಂಧಿಕರ ಎದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಊಟ ಮಾಡಿ ವಾಕ್ ಮಾಡುತ್ತಿದ್ದಾಗಗಲೇ ಬಾಗಪ್ಪನನ್ನು ಕೊಲೆಗೈದು ಪರಾರಿಯಾಗಿರೋ, ಹಂತಕರ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಬಾಗಪ್ಪ ಕೊಲೆ ವಕೀಲ ರವಿ ಹತ್ಯೆಗೆ ಪ್ರತೀಕಾರನಾ?
ಭೀಮಾತೀರದ ಹಂತಕ ಬಾಗಪ್ಪ ಬರ್ಬರ ಹತ್ಯೆ ಕೇಸ್ ತನಿಖೆಯನ್ನು ಪೊಲೀಸರು ಹಲವು ಆಯಾಮಗಳಲ್ಲಿ ಕೈಗೆತ್ತಿಕೊಂಡಿದ್ದಾರೆ. ವಕೀಲ ರವಿ ಅಗರಖೇಡ್ ಹತ್ಯೆಗೆ ಬಾಗಪ್ಪ ಕೊಲೆ ಮೂಲಕ ಪ್ರತಿಕಾರವೇ ಎನ್ನುವ ಆ್ಯಂಗಲ್ನಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೊಲೆಯಾಗಿರೋ ವಕೀಲ ರವಿ ಸಹೋದರ ಪ್ರಕಾಶ್ ಅಲಿಯಾಸ್ ಪಿಂಟ್ಯಾ ಮತ್ತು ಸಹಚರರಿಂದ ಕೃತ್ಯ ಎಂದು ಬಾಗಪ್ಪ ಪುತ್ರಿ ಗಂಗೂಬಾಯಿ ಗಾಂಧಿಚೌಕ ಠಾಣೆಗೆ ದೂರು ನೀಡಿದ್ದು, ಸದ್ಯ ಪಿಂಟ್ಯಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಾಗಪ್ಪ ಹತ್ಯೆಗೆ ಆಸ್ತಿ ಕಾರಣನಾ?
ಇತ್ತೀಚೆಗೆ ಬಾಗಪ್ಪ ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿದಿದ್ದ. ಎಲ್ಲವನ್ನೂ ವಕೀಲ ರವಿ ಮೂಲಕ ನಿರ್ವಹಣೆ ಮಾಡುತ್ತಿದ್ದ. ಆದ್ರೆ ರವಿ, ಬಾಗಪ್ಪ ವ್ಯವಹಾರದಲ್ಲಿ ಒಡಕು ಮೂಡಿತ್ತು. ಆಸ್ತಿಯಲ್ಲಿ 50 ಪರ್ಸೆಂಟ್ ಬೇಕೆಂದು ಬಾಗಪ್ಪ ಕೇಳಿದ್ದ. ಇದಕ್ಕೆ ವಕೀಲ ರವಿ ಒಪ್ಪಿರಲಿಲ್ಲ. ಇದಿಷ್ಟೇ ಅಲ್ಲ, ಕೆಲವೇ ತಿಂಗಳಲ್ಲಿ ಭಾಗ ಕೊಡುವುದಕ್ಕೆ ನಿರಾಕರಿಸಿದ್ದ ವಕೀಲ ರವಿ ಹತ್ಯೆಯೂ ನಡೆಯಿತು. 5 ತಿಂಗಳ ಹಿಂದೆಯೇ ಕಾರು ಹರಿಸಿ ವಕೀಲ ರವಿ ಹತ್ಯೆಗೈಯಲಾಗಿತ್ತು. ಕೆಲ ಹುಡುಗರ ಮೂಲಕ ಕಾರು ಹರಿಸಿ ವಕೀಲನ ಕೊಲೆಗೈಯಲಾಗಿತ್ತು. ಇದೇ ಕೇಸ್ನಲ್ಲಿ ಬಾಗಪ್ಪ ಸಹಚರರು ಅರೆಸ್ಟ್ ಆಗಿದ್ದರು.. ಇನ್ನೂ ಆರೋಪಿಗಳು ಜೈಲಿನಲ್ಲೇ ಇದ್ದಾರೆ.