ಚಿತ್ರದುರ್ಗ: ನರಬಲಿ ಕೊಟ್ಟರೆ ನಿಧಿ ಸಿಗುತ್ತೆ ಎಂಬ ಕಪಟ ಜ್ಯೋತಿಷಿಯ ಮಾತು ಕೇಳಿ ವ್ಯಕ್ತಿಯೊಬ್ಬ, ಚಪ್ಪಲಿ ಹೊಲಿಯುತ್ತಾ ಜೀವನ ನಡೆಸುತ್ತಿದ್ದವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದಲ್ಲಿ ಭಾನುವಾರ ನಡೆದಿದೆ.
ಜೆ.ಜೆ.ಕಾಲೊನಿ ನಿವಾಸಿ ಪ್ರಭಾಕರ್ ಹತ್ಯೆಯಾದ ವ್ಯಕ್ತಿ. ಪೊಲೀಸರು ನರಬಲಿ ಕೊಟ್ಟ ಆರೋಪಿ ಆಂಧ್ರ ಪ್ರದೇಶದ ಆನಂದ್ ರೆಡ್ಡಿ ಹಾಗೂ ಜ್ಯೋತಿಷಿ ರಾಮಕೃಷ್ಣ ಎಂಬಿಬ್ಬರನ್ನು ಬಂಧಿಸಿದ್ದಾರೆ.
ನಿಧಿಯಾಸೆಗೆ ಚಪ್ಪಲಿ ಹೊಲಿಯುವ ಬಡಪಾಯಿಯ ಕೊಲೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, “ಪರಶುರಾಂಪುರ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಫೆ.9ರಂದು ವ್ಯಕ್ತಿಯೋರ್ವನ ಕೊಲೆ ನಡೆದಿದೆ. ಚಪ್ಪಲಿ ಹೊಲಿಯುವ ಕಾಯಕ ಮಾಡುತ್ತಿದ್ದ 52 ವರ್ಷದ ಪ್ರಭಾಕರ್ ಹತ್ಯೆಯಾಗಿದ್ದರು. ಆರೋಪಿ ಆನಂದ್ ರೆಡ್ಡಿ ಆಂಧ್ರ ಪ್ರದೇಶದ ಕುಂದುರ್ಪಿ ಮಂಡಲದ ಕದರಾಂಪಲ್ಲಿ ಗ್ರಾಮದವರು. ಇವರು ಪಾವಗಡದ ರೆಸ್ಟೋರೆಂಟ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು” ಎಂದರು.
“ಆನಂದ್ ರೆಡ್ಡಿಗೆ ಜ್ಯೋತಿಷಿಯೊಬ್ಬರು ಪಶ್ಚಿಮಕ್ಕೆ ಹೋಗಿ ನರಬಲಿ ಕೊಟ್ಟರೆ ಚಿನ್ನ ಸಿಗುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಫೆ.9ರಂದು ಆನಂದ್ ರೆಡ್ಡಿ ಪರಶುರಾಂಪುರದ ಕಡೆ ಬಂದಿದ್ದರು. ಅಂದು ಸಂಜೆ ಪ್ರಭಾಕರ್ ಕೆಲಸ ಮುಗಿಸಿ ಮನೆಗೆ ಹೋಗುವಾಗ ಆನಂದ್ ರೆಡ್ಡಿಗೆ ಸಿಗುತ್ತಾರೆ. ಆಗ ಆನಂದ್, ಪ್ರಭಾಕರ್ಗೆ ಲಿಫ್ಟ್ ಕೊಡುವ ನೆಪದಲ್ಲಿ ಕರೆದುಕೊಂಡು ಹೋಗಿ ಒಂದೆಡೆ ಬೈಕ್ ನಿಲ್ಲಿಸಿ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಆ ನಂತರ ಆನಂದ್ರನ್ನು ಕೆಲವು ಜನರು ನೋಡಿದ್ದರಿಂದ ಬೈಕ್ ನಿಲ್ಲಿಸಿ ಪರಾರಿಯಾಗಿ ತಲೆಮರೆಸಿಕೊಂಡಿದ್ದರು” ಎಂದು ಘಟನೆಯನ್ನು ವಿವರಿಸಿದರು.
Laxmi News 24×7