ಕೊಪ್ಪಳ: ಮನುಷ್ಯನ ಬದುಕೇ ಹಲವು ತಿರುವುಗಳು, ಏರುಪೇರುಗಳ ಪ್ರಯಾಣ. ಕೆಲವೊಮ್ಮೆ ಆ ಏರುಪೇರುಗಳು, ತಿರುವುಗಳು ಜೀವನವನ್ನೇ ಬದಲಾಯಿಸಬಹುದು. ಹೀಗೆ ಜೀವನದಲ್ಲಿ ಎದುರಾದ ತಿರುವುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ ಬದುಕು ಕಟ್ಟಿಕೊಂಡವರು, ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ, ಸ್ಫೂರ್ತಿಯಾಗುತ್ತಾರೆ ಅನ್ನೋದಕ್ಕೆ ಈ ದಿಟ್ಟ ಮಹಿಳೆ ಸಾಕ್ಷಿ ಆಗುತ್ತಾರೆ.
ಹೌದು, ಜೀವನದಲ್ಲಿ ಎದುರಾದ ಸಂಕಷ್ಟಗಳಿಗೆ ಕುಗ್ಗದೆ ಧೈರ್ಯದಿಂದ ಮೆಟ್ಟಿನಿಂತು ಬದುಕು ಕಟ್ಟಿಕೊಂಡ ಸಾಹಸಿ ಮಹಿಳೆಯ ಕಥೆ ಇದು. ಈ ನೈಜ ಕಥೆಯ ನಾಯಕಿಯ ಹೆಸರು ಜಯಶ್ರೀ ಗುಳಗಣ್ಣವರ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಇಟಗಿ ಗ್ರಾಮದ ಜಯಶ್ರೀ ಗುಳಗಣ್ಣವರ ಅವರ ಗತಕಾಲದ ಬದುಕಿನ ಘಟನೆಗಳನ್ನು ಕೇಳಿದರೆ ಕಣ್ಣಾಲೆಗಳು ತುಂಬುತ್ತವೆ. ಆದರೆ ಅದೆಲ್ಲವನ್ನೂ ಮೆಟ್ಟಿನಿಂತು ಈಗ ತನ್ನ ಬದುಕನ್ನು ಕಟ್ಟಿಕೊಂಡಿರುವುದರ ಜೊತೆಗೆ ಮತ್ತಿಬ್ಬರು ಮಹಿಳೆಯರ ದುಡಿಮೆ ನೀಡಿ ದಾರಿ ದೀಪವಾಗಿದ್ದಾರೆ ಇವರು.