ಡಿಸೆಂಬರ್ 5: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಬಂಡಾಯ ಸಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಶಿಸ್ತಿನ ಪಾಠ ಮಾಡಿದ್ದಾರೆ. ಕೇಂದ್ರ ಶಿಸ್ತು ಸಮಿತಿ ಕೊಟ್ಟ ನೋಟಿಸ್ಗೆ 6 ಪುಟಗಳ ಉತ್ತರ ನೀಡಿರುವ ಯತ್ನಾಳ್, ಖುದ್ದು ಹಾಜರಾಗಿ ಲಿಖಿತ ಮಾತ್ರವಲ್ಲದೇ ಮೌಖಿಕವಾಗಿಯೂ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಬಂಡಾಯಕ್ಕೆ 6 ಪುಟಗಳ ಸುದೀರ್ಘ ಉತ್ತರ ನೀಡಿರುವ ಯತ್ನಾಳ್, ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ಗೆ ಕಾರಣಗಳನ್ನು ಕೊಟ್ಟಿದ್ದಾರೆ.
ಶಿಸ್ತು ಸಮಿತಿಗೆ ಯತ್ನಾಳ್ ಉತ್ತರವೇನು?
ನಾನು ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡಿಲ್ಲ. ವಕ್ಫ್ ವಿರುದ್ಧ ಹೋರಾಟ ಮಾಡಿದ್ದೇನೆ. ವಕ್ಫ್ ಬೋರ್ಡ್ ರೈತರು, ಮಠಗಳ ಭೂಮಿ ಕಬಳಿಸುತ್ತಿರುವಾಗ ಸುಮ್ಮನಿರಲು ಸಾಧ್ಯವಿಲ್ಲ. ಪಕ್ಷದ ರಾಜ್ಯಾಧ್ಯಕ್ಷರು ವಕ್ಫ್ ಬೋರ್ಡ್ ವಿರುದ್ಧ ಹೋರಾಟಕ್ಕೆ ಮುಂದಾಗಲಿಲ್ಲ. ಹೀಗಾಗಿ ವಕ್ಫ್ ಬೋರ್ಡ್ ವಿರುದ್ಧ ನಾವು ತಾರ್ಕಿಕವಾಗಿ ಹೋರಾಟ ಮಾಡಿದ್ದೇವೆ. ವಾಲ್ಮೀಕಿ ನಿಗಮ ಹಗರಣದ ವಿರುದ್ಧ ಹೋರಾಟದಲ್ಲಿ ಪಕ್ಷ ಭಾಗಿಯಾಗಬೇಕಿತ್ತು. ನಾವು ಪಾದಯಾತ್ರೆಗೆ ಮುಂದಾಗಿದ್ದೆವು. ಆದರೆ, ಇದಕ್ಕೆ ವ್ಯವಸ್ಥಿತ ತಡೆಯೊಡ್ಡಲಾಯಿತು. ಬಿ.ವೈ.ವಿಜಯೇಂದ್ರರಿಂದ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚುತ್ತಿದೆ. ಕೆಲವರನ್ನು ಕಟ್ಟಿಕೊಂಡು ಪಕ್ಷ ಮುನ್ನಡೆಸುತ್ತಿದ್ದಾರೆ ಹೀಗಾಗಿ ಉಪಚುನಾವಣೆಲ್ಲಿ ಸೋಲಾಯಿತು. ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಹಲವು ಕ್ಷೇತ್ರಗಳಲ್ಲಿ ಸೋಲಾಗಿದೆ. ಬಿಎಸ್ವೈ ವಿರುದ್ಧ ಹಲವು ಕೇಸ್ಗಳಿವೆ. ಹೀಗಾಗಿ ಕಾಂಗ್ರೆಸ್ ಜೊತೆಗೆ ಅವರಿಗೆ ಹೊಂದಾಣಿಕೆ ಅನಿವಾರ್ಯವಾಗಿದೆ. ನನ್ನ ಕಾರ್ಖಾನೆ ಬಂದ್ ಮಾಡಿಸಿದರು. ಆದರೂ ನಾನು ಹೋರಾಟ ಮುಂದುವರೆಸಿದ್ದೇನೆ. ನಾನು ಹಿಂದುತ್ವವನ್ನ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದೇವೆ, ಇದು ಪಕ್ಷದ ವಿರೋಧಿ ನಿಲುವೆ? ಎಂದು ಶಿಸ್ತು ಸಮಿತಿಗೆ ನೀಡಿದ ಉತ್ತರದಲ್ಲಿ ಯತ್ನಾಳ್ ಉಲ್ಲೇಖಿಸಿದ್ದಾರೆ.
Laxmi News 24×7