ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿಗೆ ಆಗ್ರಹಿಸಿ ಡಿ.10ರಂದು ಬೆಳಗಾವಿಯ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಚಿಕ್ಕೋಡಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.10ರಂದು ಸುವರ್ಣಸೌಧದ ಮುಂದೆ 5 ಸಾವಿರ ಟ್ರ್ಯಾಕ್ಟರ್ಗಳು ಹಾಗೂ ಸಾವಿರಾರು ಪಂಚಮಸಾಲಿ ಸದಸ್ಯರು ಸಮಾವೇಶಗೊಂಡು ಮುತ್ತಿಗೆ ಹಾಕುವ ಪ್ರತಿಭಟನೆ ನಡೆಸಲಿದ್ದಾರೆ. ಈ ಆಂದೋಲನವನ್ನು ತಡೆಯಲು ಅಥವಾ ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದರೆ, ಯಾವುದೇ ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಬಹುಕಾಲದಿಂದ ಬಾಕಿ ಉಳಿದಿರುವ 2ಎ ಮೀಸಲಾತಿ ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಹಿಂದೆಯೂ ಕೂಡ ಜಗದೀಶ್ ಶೆಟ್ಟರ್, ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗಲೂ ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ, ಹೋರಾಟ ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದ ಕಾರಣ ಸಮುದಾಯದವರು ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ತಿಳಿಸಿದರು.
ಡಿಸೆಂಬರ್ 7 ರಂದು ಬೆಳಗಾವಿಯಲ್ಲಿ ಹೋರಾಟ ರೂಪರೇಷಗಳನ್ನೂ ರೂಪಿಸಲು ಸಮಾಜದ ಸಚಿವರ,ಶಾಸಕರ,ಮಾಜಿ ಶಾಸಕರ,ಮುಖಂಡರ,ವಕೀಲರ ಸಭೆ ಕರೆಯಲಾಗಿದೆ ಎಂದರು.
ಜಯಮೃಂತ್ಯುಜಯ ಸ್ವಾಮೀಜಿ,ಕೂಡಲಸಂಗಮ
ಈ ಸಂಧರ್ಭದಲ್ಲಿ ಮಹಾದೇವ ಭೆಂಡವಾಡೆ, ಚಿದಾನಂದ ಕಪಲೆ,ರಮೇಶ ಹಿತ್ತಲಮನಿ,ಡಿ.ಆರ್.ಕೊಟ್ಯಪಗೋಳ,ಚಿದಾನಂದ ಕರಲಟ್ಟೆ,ಚೇತನ ಕಮತೆ,ಸುಧಾಕರ ಕಮತೆ ಉಪಸ್ಥಿತರಿದ್ದರು..