ಶಿರಹಟ್ಟಿ: ತಾಲ್ಲೂಕಿನ ಸುಹನಹಳ್ಳಿಯ ಬಸವರಾಜ ನಾವಿ ಇವರ ಹೊಲದಲ್ಲಿ ಇತ್ತೀಚೆಗೆ 2024-25 ನೇ ಸಾಲಿನ ತಡ ಮುಂಗಾರು ಹಂಗಾಮಿನ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿಯಲ್ಲಿ ಬೆಂಡೆಕಾಯಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮ ಜರುಗಿತು.
ಕೃಷಿ ವಿಜ್ಞಾನ ಕೇಂದ್ರದ ಕೃಷಿ ಎಂಜಿನಿಯರಿಂಗ್ ವಿಜ್ಞಾನಿ ವಿನಾಯಕ ನಿರಂಜನ್ ಮಾತನಾಡಿ, ಬೆಂಡೆಕಾಯಿ ಬೆಳೆಯಲ್ಲಿ ಅಧಿಕ ಹಾಗೂ ಗುಣಮಟ್ಟದ ಬೆಂಡೆಕಾಯಿ ಉತ್ಪಾದಕತೆಗಾಗಿ ಅರ್ಕಾ ನಿಖಿತಾ ಎಂಬ ಹೊಸ ಸಂಕರಣ ತಳಿಯನ್ನು ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ.
ಸಮಗ್ರ ಬೆಳೆ ನಿರ್ವಹಣೆಯೊಂದಿಗೆ ಅಳವಡಿಸಲಾದ ಪ್ರಸ್ತುತ ತಳಿಯು ಅತ್ಯಂತ ಕಡಿಮೆ ಅವಧಿಯಲ್ಲಿ ಇಳುವರಿ ಬಿಡುತ್ತದೆ. ಇದರ ಸಮಗ್ರ ಮಾಹಿತಿ ಹಾಗೂ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೆವಿಕೆ ತೋಟಗಾರಿಕೆ ತಜ್ಞೆ ಹೇಮಾವತಿ ಹಿರೇಗೌಡರ ಮಾತನಾಡಿ, ಅರ್ಕಾ, ನಿಖಿತಾ ಒಂದು ಜೈವಿಕ ಬಲವರ್ಧಿತ ಸಂಕರಣ ತಳಿಯಾಗಿದ್ದು, ಬೇಗನೆ ಹೂವು ಬಿಟ್ಟು ಕಾಯಿಗಳನ್ನು ಕಟ್ಟುತ್ತದೆ. ಸುಮಾರು 125 ರಿಂದ 130 ದಿನಗಳ ಅವಧಿಯ ಬೇಸಾಯವಾಗಿದೆ. ಪ್ರತಿ ಎಕರೆಗೆ 8-9 ಟನ್ ಇಳುವರಿಯನ್ನು ಕೊಡುವ ಸಾಮರ್ಥ್ಯ ಹೊಂದಿದ್ದು ಈ ತಳಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರಿನಿಂದ ಬಿಡುಗಡೆಯಾಗಿದೆ ಎಂದರು.
Laxmi News 24×7