ಹುಣಸಗಿ: ಸುರಪುರ ಮತಕ್ಷೇತ್ರದ ಸೇರಿ ಯಾದಗಿರಿ ಜಿಲ್ಲೆಯಲ್ಲಿ ಸ್ವಂತ ಮಾಲಿಕತ್ವ ಹೊಂದಿದ ರೈತನ ಜಮೀನನ್ನು ವಕ್ಫ್ ಎಂದು ಪಹಣಿ ನಮೂದಾಗಿರುವ ವಿಷಯ ಗಮನಕ್ಕೆ ಬಂದಿದ್ದು, ಇದನ್ನು ತಕ್ಷಣವೇ ಸರಿಪಡಿಸದಿದ್ದರೆ ಬಿಜೆಪಿ ಹೋರಾಟ ಮಾಡಲಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೂಗೌಡ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಹಲವೆಡೆ ರೈತರ ಪಹಣಿಯ ಕಾಲಂ ನಂ 11 ರಲ್ಲಿ ವಕ್ಫ್ ಎಂದು ನಮೂದಾಗಿರುವ ಸಂದರ್ಭದಲ್ಲಿ ಇಲ್ಲಿಯೂ ಇಂತಹ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ ಎಂದು ವರದಿಯಿಂದ ತಿಳಿದು ಬಂದಿದೆ.
ಹುಣಸಗಿ ತಾಲ್ಲೂಕಿನಲ್ಲಿ 34, ಸುರಪುರ 56 ಸೇರಿ ಜಿಲ್ಲೆಯಲ್ಲಿ 549 ಪ್ರಕರಣಗಳ ವರದಿಯಾಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಇದನ್ನು ಸರಿಪಡಿಸಿ ರೈತರ ಹಿತ ಕಾಪಾಡಬೇಕು. ಯಾವುದೇ ಸಂದರ್ಭದಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಎಂದು ಹೇಳಿದರು.
ಸಕ್ರಮ ವಕ್ಫ್ ಆಸ್ತಿ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ ಯಾರದೊ ಜಾಗವನ್ನು ಯಾರದೊ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವ ಕುರಿತು ನಮ್ಮ ತಕರಾರು ಇದೆ ಎಂದರು.