ಚಿಂಚೋಳಿ: ಗ್ರಾಮದ ರೈತ ಪ್ರಭು ಮಸಾನೆ ಅವರು ಕೇವಲ ಒಂದು ಎಕರೆಯಲ್ಲಿ ಶುಂಠಿ ಹಾಗೂ ಪಪ್ಪಾಯಿ ಬೆಳೆದು ₹ 18 ಲಕ್ಷಕ್ಕೂ ಅಧಿಕ ಆದಾಯ ಗಳಿಸಿ ಯಶಸ್ಸು ಕಂಡಿದ್ದಾರೆ.
ಕೇವಲ ಏಳನೇ ತರಗತಿಯವರೆಗೆ ಓದಿದ ಮಸಾನೆ ಅವರು ಕೃಷಿಯಲ್ಲಿ ಇಪ್ಪತ್ತೈದು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.
ಅವರಿಗೆ ಒಟ್ಟು ಏಳು ಎಕರೆ ಭೂಮಿ ಇದೆ. ಅದರಲ್ಲಿ ಆರು ಎಕರೆಯಲ್ಲಿ ಸಾಂಪ್ರದಾಯಿಕ ಬೆಳೆ ಬೆಳೆದಿದ್ದಾರೆ. ಒಂದು ಎಕರೆಯ ಅರ್ಧಭಾಗಕ್ಕಿಂತಲೂ ಹೆಚ್ಚು ಜಾಗದಲ್ಲಿ ಬೆಳೆದ ಶುಂಠಿ ಖರ್ಚು ಹೋಗಿ ₹13 ಲಕ್ಷ ಆದಾಯ ತಂದು ಕೊಟ್ಟಿದೆ. ಇನ್ನುಳಿದ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ ಈಗಾಗಲೇ ₹5 ಲಕ್ಷ ಗಳಿಕೆಯಾಗಿದೆ’ ಎನ್ನುತ್ತಾರೆ ರೈತ ಮಸಾನೆ.
‘ಒಂದು ಎಕರೆ ಭೂಮಿಯಲ್ಲಿ ಶುಂಠಿ ಹಾಗೂ ಪಪ್ಪಾಯಿ ಬೆಳೆಯಲು ಭೂಮಿ ಹದ, ಬೀಜ ಬಿತ್ತನೆ, ಔಷಧ ಸಿಂಪಡಣೆ, ಕಳೆ ತೆಗೆಯುವುದು ಸೇರಿ ಸುಮಾರು ₹2 ಲಕ್ಷದವರೆಗೆ ಖರ್ಚಾಗಿದೆ’ ಎನ್ನುತ್ತಾರೆ ಅವರು.
‘ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಶುಂಠಿಗೆ ಬೇಡಿಕೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಬೆಳೆ ಹುಲುಸಾಗಿ ಬೆಳೆದಿದ್ದು ಅಧಿಕ ಇಳುವರಿ ಬಂದಿದೆ. ಪ್ರತಿ ಕ್ವಿಂಟಲ್ ಗೆ ₹12 ಸಾವಿರದಂತೆ 135 ಕ್ವಿಂಟಲ್ ಶುಂಠಿ ಮಾರಾಟ ಮಾಡಲಾಗಿದೆ. ಇದರಿಂದ ಆದಾಯದಲ್ಲಿ ಹೆಚ್ಚಳವಾಗಿದೆ’ ಎಂದು ರೈತ ಸಂತಸ ವ್ಯಕ್ತಪಡಿಸುತ್ತಾರೆ.