ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ₹60 ಕೋಟಿ ಅವ್ಯವಹಾರದ ತನಿಖೆಗೆ ನಿರ್ಣಯ ಕೈಗೊಳ್ಳಲಾಗಿದೆ. ಇದೇ ವಿಚಾರವಾಗಿ ರೈತರು ಕಳೆದ ವಾರ ನಿರಂತರ ಹೋರಾಟ ಮಾಡಿದರು. ಫಲವಾಗಿ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರೈತರು ತನಿಖೆ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ದಶಕಗಳಿಂದಲೂ ರೈತರ ಜೀವನಾಡಿಯಾಗಿದ್ದ ಕಾರ್ಖಾನೆಯ ಈಗ ವಿವಾದದ ಕೇಂದ್ರವಾಗಿದೆ.
‘ಕಾರ್ಖಾನೆಯಲ್ಲಿ ನಡೆದ ಅವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಕಾರ್ಖಾನೆಯ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅವರ ಬೆಂಬಲಿಗರೇ ಕಾರಣ. ಕಾರ್ಖಾನೆ ಅಭಿವೃದ್ಧಿಯಿಂದ ಮುನ್ನಡೆಸುತ್ತಾರೆಂಬ ನಂಬಿಕೆ ಅವರ ಮೇಲಿತ್ತು. ಅದು ಹುಸಿಯಾಗಿದೆ. ವಿವಿಧ ವಿಭಾಗಗಳಲ್ಲಿ ತಮಗೆ ಬೇಕಾದವರನ್ನು ನೇಮಿಸಿಕೊಂಡು ಹಣ ಕಬಳಿಸಿದ್ದಾರೆ.ಆ ಹಣವನ್ನು ಕಿತ್ತೂರಿನ ಸಹಕಾರ ಸಂಸ್ಥೆಯೊಂದರಲ್ಲಿ ಹೂಡಿ, ಅದೇ ಹಣವನ್ನು ಕಾರ್ಖಾನೆಗೆ ಸಾಲದ ರೂಪವಾಗಿ ಕೊಡಿಸಿದ್ದಾರೆ’ ಎಂಬುದು ಕಾರ್ಖಾನೆಯ ಆಡಳಿತ ಮಂಡಳಿ ಆರೋಪ ಮಾಡಿದೆ.
‘ನಾವು ಏನೂ ಅವ್ಯಹಾರ ಮಾಡಿಲ್ಲ. ಆಡಳಿತ ಮಂಡಳಿಯವರ ಅವ್ಯವಹಾರದ ಸಂಪೂರ್ಣ ದಾಖಲೆಗಳು ನಮ್ಮ ಬಳಿ ಇವೆ. ಯಾವ ನಿರ್ದೇಶಕ ಎಷ್ಟೆಷ್ಟು ಹಣ ಲೂಟಿ ಹೊಡೆದಿದ್ದಾರೆ ಗೊತ್ತಿದೆ’ ಎಂದು ಕಾರ್ಖಾನೆಯ ಸಕ್ಕರೆ ವಿಭಾಗದ ಮುಖ್ಯಸ್ಥರು ಹಾಗೂ ಸಹಕಾರಿ ಸಂಘದ ಮುಖ್ಯಸ್ಥರು ತಿರುಗೇಟು ನೀಡಿದ್ದಾರೆ.