ಒಕ್ಕಲೆಬ್ಬಿಸಲು ಬಂದ ಅರಣ್ಯಾಧಿಕಾರಿಗಳು: ವಿಷದ ಬಾಟಲಿ ಹಿಡಿದು ಕುಳಿತ ಮಹಿಳೆಯರು
ಚನ್ನಮ್ಮನ ಕಿತ್ತೂರು: ತೆನೆಗಟ್ಟಿರುವ ಗೋವಿನ ಜೋಳ, ಎದೆ ಎತ್ತರ ಬೆಳೆದು ನಿಂತಿರುವ ಕಬ್ಬು ಬೆಳೆ ನಾಶ ಮಾಡಿ ಒಕ್ಕಲೆಬ್ಬಿಸಲು ಆಗಮಿಸಿದ್ದ ಅರಣ್ಯಾಧಿಕಾರಿಗಳ ವಿರುದ್ಧ ತಾಲ್ಲೂಕಿನ ದೇವಗಾಂವ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ಕೆಲವು ಮಹಿಳೆಯರು ವಿಷದ ಬಾಟಲಿಗಳನ್ನೂ ಹಿಡಿದು ಕುಳಿತರು.
12ಕ್ಕೂ ಹೆಚ್ಚು ಜೆಸಿಬಿ ಯಂತ್ರಗಳೊಂದಿಗೆ ಬಂದಿದ್ದ ಅರಣ್ಯಾಧಿಕಾರಿಗಳನ್ನು ಜಮೀನಿನ ಬಳಿ ತಡೆದರು. ಪೊಲೀಸ್ ಅಧಿಕಾರಿಗಳು ಸಂಧಾನಕ್ಕೆ ಯತ್ನಿಸಿದರು. ಬೆಳೆ ನಾಶಕ್ಕೆ ಒಪ್ಪದ ರೈತರು, ‘ಇನ್ನೆರಡು ತಿಂಗಳಲ್ಲಿ ಬೆಳೆ ಕೈಗೆ ಬರುತ್ತದೆ. ಕೊಯ್ಲು ಮಾಡಲು ಅವಕಾಶ ನೀಡಬೇಕು’ ಎಂದು ರಮೇಶ ಉಗರಖೋಡ ಸೇರಿ ಹಲವಾರು ರೈತರು ವಾದಿಸಿದರು.
‘1957ರಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತ ಬಂದಿದ್ದೇವೆ. ಪಹಣಿ ಪತ್ರಿಕೆಯ ಸಾಗುವಳಿದಾರರ ಕಾಲಮ್ಮಿನಲ್ಲಿ ಕೆಲವರ ಹೆಸರುಗಳಿವೆ. ಅನಂತರ ಈ ಭೂಮಿಯನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಪಡೆಯಲಾಗಿದೆ’ ಎಂದು ರೈತರು ದೂರಿದರು.
‘ನಮ್ಮ ಪಕ್ಕಕ್ಕಿರುವ ಜಮೀನು ಸಾಗುವಳಿ ಮಾಡುತ್ತ ಬಂದಿದ್ದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲಾಗಿದೆ. ಅವರಿಗೆ ನೀಡಿದ ಭೂಮಿ ಹಕ್ಕು ನಮಗೇಕೆ ನೀಡುತ್ತಿಲ್ಲ’ ಎಂದು ಪ್ರಶ್ನಿಸಿದರು.
‘ಇದೇ ಭೂಮಿಯಲ್ಲಿ ನಮ್ಮ ಬದುಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮದೆಂದು ಒಕ್ಕಲೆಬ್ಬಿಸಲು ಬಂದಿದ್ದಾರೆ. ಸಾಲಮಾಡಿ ಬಿತ್ತನೆ ಮಾಡಿದ್ದೇವೆ. ಇನ್ನೇನು ಬೆಳೆ ಕೈಗೆ ಬರಲಿದೆ. ಆದರೆ ಅರಣ್ಯಾಧಿಕಾರಿಗಳು ಬೆಳೆನಾಶ ಮಾಡಿ, ಟ್ರೆಂಚ್ ಹೊಡೆದು, ಸಸಿ ನೆಡಲು ಬಂದಿದ್ದಾರೆ. ಜಾಗ ಬಿಟ್ಟು ನಾವು ಕದಲುವುದಿಲ್ಲ. ನೀವು ತೋಡಿದ ಟ್ರೆಂಚ್ ನಲ್ಲಿ ನಮ್ಮನ್ನೂ ಮುಚ್ಚಿ ಹೋಗಿ’ ಎಂದು ಮಹಿಳೆಯರು ಆಕ್ರೋಶದಿಂದ ನುಡಿದರು.