ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳೆದೊಂದು ವಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಾಜಸ್ಥಾನದಿಂದ ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಿ ತಂದ ಆರೋಪ ಪ್ರಕರಣದ ಲ್ಯಾಬ್ ವರದಿ ಬಂದಿದ್ದು, ಅದು ಕುರಿ ಮಾಂಸ ಎಂಬುದು ವರದಿಯಲ್ಲಿ ದೃಢಪಟ್ಟಿದೆ. ಜೊತೆಗೆ, ಈ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಆಹಾರ ಇಲಾಖೆಯು ಪ್ರಕಟಿಸಿದ್ದು, ಅದು ನಾಯಿ ಮಾಂಸ ಅಲ್ಲ, ಶಿರೋಹಿ ತಳಿಯ ಕುರಿ ಮಾಂಸ ಎಂಬುದನ್ನು ವರದಿಯಲ್ಲಿ ಬಹಿರಂಗ ಪಡಿಸಲಾಗಿದೆ. ಎಸ್ ಓವಿಸ್ ಏರಿಯಾಸ್ (ಶೀಪ್) ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇದು ಕುರಿಯ ವೈಜ್ಞಾನಿಕ ಹೆಸರಾಗಿದೆ. ಹೀಗಾಗಿ ಬೆಂಗಳೂರಿಗರು ಇನ್ನು ನಿಶ್ಚಿಂತೆಯಿಂದ ಇರಬಹುದು. ಆಧಾರರಹಿತ ವದಂತಿಗಳಿಗೆ ಕಿವಿಗೊಡಬೇಡಿ. ಅಧಿಕೃತವಾಗಿ ಇದು ಕುರಿ ಮಾಂಸ ಎಂಬುದು ದೃಢಪಟ್ಟಿದೆ. ತಪ್ಪು ಮಾಹಿತಿ ಹರಡುವುದನ್ನು ತಡೆಯುವಲ್ಲಿ ನಿಮ್ಮ ಸಹಕಾರ ಅತ್ಯಗತ್ಯ ಎಂದು ದಿನೇಶ್ ಗುಂಡೂರಾವ್ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಆಹಾರ ಇಲಾಖೆ ಸ್ಪಷ್ಟನೆ: ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ಕುರಿಮರಿ ಮತ್ತು ಇತರ ಪ್ರಾಣಿಗಳ ಮಾಂಸವನ್ನು ಸಾಗಿಸಲಾಗುತ್ತಿದೆ ಎಂದು ಇತ್ತೀಚೆಗೆ ಚರ್ಚೆಗೀಡು ಮಾಡಿದ್ದ ಸಂಗತಿ ಯನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕಷವಾಗಿ ತನಿಖೆ ಮಾಡಲಾಗಿತ್ತು. ಒಟ್ಟು 84 ಪಾರ್ಸೆಲ್ಗಳನ್ನು ಹೈದರಾಬಾದ್ನಲ್ಲಿರುವ ಐಸಿಎಆರ್-ರಾಷ್ಟ್ರೀಯ ಮಾಂಸ ಸಂಶೋಧನಾ ಸಂಸ್ಥೆಗೆ ಕಳುಹಿಸಿಲಾಗಿತ್ತು. ಇದೀಗ ವರದಿಯಲ್ಲಿ ಕುರಿ ಮಾಂಸ ಎಂಬುದು ದೃಢವಾಗಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಸ್ಪಷ್ಟನೆ ನೀಡಿದೆ.