ಬೆಳಗಾವಿ: ‘ಇಲ್ಲಿನ ಕೆಎಲ್ಇ ಸಂಸ್ಥೆ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ರೊಬಾಟಿಕ್ ತಂತ್ರಜ್ಞಾನ ಬಳಸಿ ಇಬ್ಬರಿಗೆ ಯಶಸ್ವಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಕೇಂದ್ರದ ವೈದ್ಯಕೀಯ ನಿರ್ದೆಶಕ ಕರ್ನಲ್ ಡಾ.
ಎಂ. ದಯಾನಂದ ಹೇಳಿದರು.
‘ಅನ್ನನಾಳ ಕ್ಯಾನ್ಸರಿನಿಂದ ಬಳಲುತ್ತಿದ್ದ 62 ಮತ್ತು 70 ವರ್ಷದ ಇಬ್ಬರು ರೋಗಿಗಳಿಗೆ ಸುಮಾರು 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಇದು ಉತ್ತರ ಕರ್ನಾಟಕದಲ್ಲಿ ನಡೆದ ಮೊದಲ ಪ್ರಯೋಗ. ಕೆಎಲ್ಇ ಆಸ್ಪತ್ರೆ ಇಂಥ ಹೊಸತನಗಳಿಗೆ ಯಾವಾಗಲೂ ಮುಂದಿದೆ’ ಎಂದು ಅವರು ಆಸ್ಪತ್ರೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ವೈದ್ಯವಿಜ್ಞಾನ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಅದಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದೇವೆ. ರೊಬಾಟಿಕ್ ತಂತ್ರಜ್ಞಾನ ಶಸ್ತ್ರಚಿಕಿತ್ಸೆಗೆ ಸಾಕಷ್ಟು ಸಹಕಾರಿ ಎಂಬುದನ್ನು ಸಾಬೀತು ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.
ಕರ್ನಲ್ ಡಾ.ಎಂ. ದಯಾನಂದ
‘ಕಳೆದ ಮೂರು ದಶಕಗಳ ಹಿಂದೆ ವೈದ್ಯವಿಜ್ಞಾನದ ತಂತ್ರಜ್ಞಾನಕ್ಕೆ ಪರಿಚಿತವಾದ ರೊಬಾಟಿಕ್ ಇಂದು ಕ್ರಾಂತಿಕಾರಿ ತಂತ್ರಜ್ಞಾನವಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ಅದ್ಭುತ ಕೊಡುಗೆ ನೀಡುತ್ತ ನಿರಂತರವಾಗಿ ಅಭಿವೃದ್ದಿಗೊಳ್ಳುತ್ತಿದೆ. ಅತ್ಯಂತ ಕ್ಲಿಷ್ಟಕರವಾದ ಹಾಗೂ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಗಳನ್ನು ರೊಬಾಟಿಕ್ನಿಂದ ವೈದ್ಯರು ನೆರವೇರಿಸಲು ಸಹಕಾರಿಯಾಗಲಿದೆ’ ಎಂದರು.
‘3ಡಿ ತಂತ್ರಜ್ಞಾನ, ತೀಕ್ಷ್ಣವಾದ ಕ್ಯಾಮೆರಾ ಹಾಗೂ ಅತ್ಯಾಧುನಿಕ ಉಪರಣಗಳನ್ನು ಹೊಂದಿರುವುದರಿಂದ ಶಸ್ತ್ರಚಿಕಿತ್ಸೆಯ ಸ್ಥಳವನ್ನು ನಿಖರವಾಗಿ ತಲುಪಬಹುದು. ಇದರಿಂದ ಅತ್ಯಂತ ಸಂಕೀರ್ಣತೆಯಿಂದ ಕೂಡಿದ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ನೆರವೇರಿಸಲು ಸಹಕರಿಸುತ್ತದೆ’ ಎಂದರು.