ಬಾಗಲಕೋಟೆ : ಮುಗ್ದಜನರ ಅಸಹಾಯಕತೆಯನ್ನ ಲಾಭ ಮಾಡಿಕೊಂಡು ಪೂಜೆ-ಪುನಸ್ಕಾರ ಅಂತೆಲ್ಲಾ ಹೇಳಿ ದುಡ್ಡು ಪೀಕುವ ಬಾಬಾಗಳು, ಪವಾಡ ಪುರುಷರು, ದೇವ ಮಾನವರ ಬಗ್ಗೆ ನಾವು ಕೇಳಿರುತ್ತೇವೆ. ಪೂಜೆಗಳನ್ನ (Worship) ಮಾಡಿಸಿದರೆ ಒಳ್ಳೆಯದಾಗುತ್ತೇ, ನಿಮ್ಮ ಕಷ್ಟಗಳು ಪರಿಹಾರ ಸಿಗಲಿವೆ ಎಂದೆಲ್ಲಾ ಹೇಳಿ ಮೋಸ ಮಾಡುವ ಜನರನ್ನ ಕೇಳಿರುತ್ತೇವೆ.
ಆದರೆ ಇಲ್ಲೊಂದು ಮೂಡನಂಬಿಕೆಯಿಂದ (Superstition) ನಡೆದಿರುವ ಘಟನೆ ಕೇಳಿದರೆ ಬೆಚ್ಚಿ ಬೀಳುತ್ತೀರಾ. ಪೂಜಾರಿಯೊಬ್ಬ (Priest) ದೇಹದ ಭಾಗಗಗಳು ನೋವು ಎಂದು ಬಂದವರಿಗೆ ಕೊಡಲಿಯಿಂದ ಏಟು ಕೊಡುವ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ವಿಡಿಯೋ ನೋಡಿದವರಿಗೆ ಮೈ ನಡುಗೋದಂತು ಗ್ಯಾರಂಟಿ.
ಭಂಡಾರ ಹಚ್ಚಿ ಕೊಡಲಿ ಏಟು
ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನದ ಪೂಜಾರಿ ಮೈ ಕೈ ನೋವು ಎಂದು ಬರುವವರಿಗೆ ಕೊಡಲಿಯಿಂದ ಹೊಡೆಯುತ್ತಾನೆ. ನೋವಿನ ಭಾಗಕ್ಕೆ ಬಂಡಾರ ಹಚ್ಚಿ ಕೊಡಲಿಯಿಂದ ಹೊಡೆದರೆ ಬೇಗ ಗುಣಮುಖವಾಗುತ್ತದೆ ಎಂದು ಮೂಢನಂಬಿಕೆಯಿಂದ ಈ ರೀತಿ ಮಾಡಲಾಗುತ್ತಿದೆ. ವಿಚಿತ್ರವೆಂದರೆ ಇದನ್ನ ನಂಬಿ ಹಲವಾರು ಮಂದಿ ಕೊಡಲಿ ಪೆಟ್ಟು ತಿನ್ನಲು ಬರುತ್ತಿದ್ದಾರೆ.