ಹುಬ್ಬಳ್ಳಿ: ಸಾರ್ವಜನಿಕರ ನಿದ್ದೆಗೆಡಿಸಿದ್ದ ಇಲ್ಲಿನ ಕಾರವಾರ ರಸ್ತೆಯ ಕೆಂಪಗೆರೆ ಮತ್ತು ಧಾರವಾಡದ ಹೊಸ ಯಲ್ಲಾಪುರದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮೂರ್ನಾಲ್ಕು ದಶಕಗಳಿಂದ ಸಂಗ್ರಹವಾಗಿರುವ ಕಸಕ್ಕೆ ಶೀಘ್ರದಲ್ಲಿಯೇ ಮುಕ್ತಿ ಸಿಗಲಿದೆ.
21 ಎಕರೆ ಪ್ರದೇಶದಲ್ಲಿ ಕೆಂಪಗೆರೆ ಘಟಕ ಇದ್ದು, ಇಲ್ಲಿ 3.60 ಲಕ್ಷ ಟನ್ ಕಸ ಸಂಗ್ರಹವಾಗಿದೆ.
ಹೊಸ ಯಲ್ಲಾಪುರದ 1.20 ಲಕ್ಷ ಟನ್ ಹಳೆ ಕಸ ಇದೆ. ಹುಬ್ಬಳ್ಳಿಯಲ್ಲಿ ಪ್ರತಿ ದಿನ 300 ಟನ್ ಕಸ ಉತ್ಪತ್ತಿಯಾದರೆ, ಧಾರವಾಡದಿಂದ 120 ಟನ್ ಕಸ ಸಂಗ್ರಹವಾಗುತ್ತದೆ.
ಘಟಕದಿಂದ ಬರುವ ಹೊಗೆ, ದುರ್ವಾಸನೆ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೇಸಿಗೆಮಡ್ಡಿ (ಗಾರ್ಬೇಜ್ ಯಾರ್ಡ್) ತೆರವು ಹೋರಾಟ ಸಮಿತಿ ಸದಸ್ಯರು ಘಟಕದ ಬಳಿ ಮೂರು ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದರು.
ಈಗ ಕೆಂಪಗೆರೆ ಘಟಕದ ಕಸ ನಿರ್ವಹಣೆಗೆ ₹22 ಕೋಟಿ, ಹೊಸಯಲ್ಲಾಪುರದ ಕಸ ನಿರ್ವಹಣೆಗೆ ₹6 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದ್ದು, ಗುಜರಾತ ಮೂಲದ ಡಿ.ಎಚ್.ಪಾಟೀಲ ಕಂಪನಿ ಟೆಂಡರ್ ಪಡೆದಿದೆ.
ಕಂಪನಿಯ ಸಿಬ್ಬಂದಿ ಎರಡೂ ಘಟಕದಲ್ಲಿ ಈಗಾಗಲೇ ಸರ್ವೆ ಕಾರ್ಯ ಆರಂಭಿಸಿದ್ದು, ಸಿಬ್ಬಂದಿ ನಿಯೋಜನೆ, ವೇಬ್ರಿಡ್ಜ್ ಸೇರಿದಂತೆ ಇನ್ನಿತರ ಯಂತ್ರೋಪಕರಣಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಬಿ.ಎಂ, ‘ಪ್ರತಿ ದಿನ 1 ಸಾವಿರ ಟನ್ ಕಸವನ್ನು ಜರಡಿ ಹಿಡಿದು ಮಣ್ಣು, ಪ್ಲಾಸ್ಟಿಕ್, ಗಾಜು, ಕಬ್ಬಿಣದಂತಹ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಅದರಲ್ಲಿ ಬರುವ ಮಣ್ಣನ್ನು ನಿರ್ಮಾಣ ಹಂತದಲ್ಲಿರುವ ಹೊಸ ಬಡಾವಣೆಗಳಲ್ಲಿ ಹಾಕಲಾಗುತ್ತದೆ’ ಎಂದರು.
‘ಇಲ್ಲಿ ಸಂಗ್ರಹವಾಗಿರುವ ಕಸದಲ್ಲಿ ಗೊಬ್ಬರ ಪ್ರಮಾಣ ಸಿಗುವುದು ತೀರಾ ಕಡಿಮೆ. ಶೇ 60-70ರಷ್ಟು ಮಣ್ಣು ಸಿಗಲಿದೆ. ಕಸ ವಿಂಗಡಣೆ ಪ್ರಕ್ರಿಯೆ ಮುಗಿದ ನಂತರ ಕಂಪನಿಯು ಲ್ಯಾಂಡ್ಸ್ಕೇಪ್ ಮಾಡಲಿದ್ದು, ನಂತರ ಪಾರ್ಕಿಂಗ್ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸುವ ಕಲ್ಪಿಸುವ ಚಿಂತೆ ಇದೆ’ ಎಂದು ಮಾಹಿತಿ ನೀಡಿದರು.