ಕಿತ್ತೂರು: ಮೇ ಕೊನೆಯ ಮತ್ತು ಜೂನ್ ಮೊದಲ ವಾರದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಶೇ 90ರಷ್ಟು ಜಮೀನಿನಲ್ಲಿ ರೈತರು ವಿವಿಧ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆದಿವೆ. ಕಣ್ಣು ಹಾಯಿಸಿದಷ್ಟು ಹಚ್ಚ ಹಸಿರು ಪೈರು ಮನಸ್ಸಿಗೆ ಮುದ ನೀಡುವಂತಿದೆ.
‘ಪೈರಿನ ಗದ್ದೆಯಲ್ಲಿ ಬೆಳೆದಿರುವ ಕಸ ಕೀಳುವುದು, ನಾಟಿ ಮಾಡಿದ ಮತ್ತು ಕುಳೆ ಕಬ್ಬಿಗೆ ರಸಗೊಬ್ಬರ ಕಟ್ಟುವುದು, ಉಳಿದ ಭೂಮಿ ಬಿತ್ತನೆಗೆ ಸಿದ್ಧಪಡಿಸುವ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿವೆ’ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸುತ್ತವೆ.
ಸೋಯಾಬೀನ್, ಭತ್ತ, ಗೋವಿನಜೋಳ ಬಿತ್ತನೆ ಮಾಡಲಾಗಿದೆ. ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕಟಾವು ಮಾಡಿದ ಕುಳೆ ಕಬ್ಬು ಆಳೆತ್ತರ ಬೆಳೆದಿದ್ದನ್ನು ಬಹುತೇಕ ಕಡೆ ಕಾಣಬಹುದಾಗಿದೆ.
ಕೃಷಿ ಚಟುವಟಿಕೆಗೆ ಮಳೆರಾಯ ಈಗ ಸ್ವಲ್ಪ ಬಿಡುವು ನೀಡಿದ್ದಾನೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಬಿತ್ತನೆ ಮಾಡಿದ ಬೀಜಗಳು ನಿರೀಕ್ಷೆಗೆ ತಕ್ಕ ಹಾಗೆ ಮೊಳಕೆ ಒಡೆದು ಬೆಳೆಯುತ್ತಿರುವುದು ರೈತನ ಮೊಗದಲ್ಲಿ ಹೆಚ್ಚು ಖುಷಿ ತಂದಿದೆ.