ಬೆಂಗಳೂರು, ಮೇ 28: ಬಿಜೆಪಿಯೇ ಉಸಿರು ಎಂಬ ಕಮಲ ಕಲಿಗಳನ್ನ ಪಕ್ಷದಿಂದ ಹೊರ ಹಾಕಿದ್ದಾರೆ. ಬಿಜೆಪಿಯ ಶಿಸ್ತಿನ ಸಿಪಾಯಿಗಳು ಟಿಕೆಟ್ ಕೇಳಿದ್ದಕ್ಕೆ ಪಕ್ಷ ಅವರನ್ನ ತನ್ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದೆ. ಬಿಜೆಪಿ ಪಕ್ಷ ಕಟ್ಟಿದವರಲ್ಲಿ ಒಬ್ಬರಾದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಹಾಗೂ ಹಿಂದು ಹುಲಿ ರಘುಪತಿ ಭಟ್ ಅವರನ್ನ ಪಕ್ಷ ಉಚ್ಚಾಟಿಸಿದೆ.
ಹೌದು, ಟಿಕೆಟ್ ಕೇಳೋದು ತಪ್ಪಾ? ಈ ಪ್ರಶ್ನೆಗೆ ಉತ್ತರ ಮಾತ್ರವಿಲ್ಲ. ಪಕ್ಷವೇ ಉಸಿರು, ಬಿಜೆಪಿಯೇ ತಾಯಿ ಎಂದು ನಂಬಿದ್ದ ಇಬ್ಬರು ಕಟ್ಟಾಳುಗಳಿಗೆ ಸಿಕ್ಕಿದ್ದು, ಉಚ್ಛಾಟನೆಯ ಭಾಗ್ಯ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ಟಿಕೆಟ್ ಬೇಡಿಕೆ ಇಟ್ಟ ಬಿಜೆಪಿಯ ಶಿಸ್ತಿನ ಸಿಪಾಯಿಗಳನ್ನ ಬಿಜೆಪಿ ಮೂಲೆಗುಂಪು ಮಾಡುತ್ತಿದೆಯಾ? ಎಂಬ ಪ್ರಶ್ನೆ ಉದ್ಭವಿಸಿದೆ.
ಈಶ್ವರಪ್ಪ ಉಚ್ಛಾಟನೆಯಾಗಿದ್ದು ಯಾಕೆ?
ಲೋಕಸಭಾ ಚುನಾವಣೆಗೆ ಪುತ್ರಿನಿಗೆ ಹಾವೇರಿಯಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ತೊಡೆತಟ್ಟಿದ್ರು. ಶಿವಮೊಗ್ಗದಿಂದ ಪಕ್ಷೇತ್ತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ರು, ಅಲ್ಲದೇ ಚುನಾವಣಾ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುಟುಂಬದಿಂದ ಬಿಜೆಪಿಯನ್ನು ಮುಕ್ತಗೊಳಿಸಬೇಕು ಎಂದು ಪಣತೊಟ್ಟಿರುವ ಕೆ ಎಸ್ ಈಶ್ವರಪ್ಪ ಅವರಿಗೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹಲವು ಬಿಜೆಪಿ ನಾಯಕರು ಮನವೊಲಿಸಿದ್ರು. ಆದರೂ ಸಹ ನಾಮಪತ್ರವನ್ನೂ ವಾಪಸ್ ಪಡೆಯದ ಹಿನ್ನೆಲೆಯಲ್ಲಿ ಕೆ ಎಸ್ ಈಶವರಪ್ಪ ಅವರಿಗೆ ಗೇಟ್ ಪಾಸ್ ನೀಡಬೇಕಾಯಿತು.
ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ದ ಕಣದಲ್ಲಿದ್ದ ಆರೋಪ. ಈಶ್ವರಪ್ಪನವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದ ಹಿನ್ನೆಲೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಕುರುಬ ಸಮುದಾಯದ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಅವರನ್ನ 6 ವರ್ಷಗಳ ಕಾಲ ಬಿಜೆಪಿಯೂ ಉಚ್ಚಾಟಿಸಿ ಆದೇಶ ಹೊರಡಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದೇ ಎಸ್.ಎನ್.ಚನ್ನಬಸಪ್ಪ ಅವರನ್ನ ಕಣಕ್ಕಿಳಿಸಿತ್ತು. ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ಕೊಡದೆ ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ಶಿವಮೊಗ್ಗದಿಂದ ಕಣಕ್ಕಿಳಿದಿದ್ದರು.
ರಘುಪತಿ ಭಟ್ ಉಚ್ಚಾಟನೆಯಾಗಿದ್ದು ಯಾಕೆ?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯ ರಘುಪತಿ ಭಟ್ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿತ್ತು. ಜಿಲ್ಲೆಯಲ್ಲಿ ಒಬ್ಬರು ಬ್ರಾಹ್ಮಣ ಸಮುದಾಯದವರಿಗೆ ಟಿಕೆಟ್ ಕೊಟ್ಟ ಹಿನ್ನಲೆಯಲ್ಲಿ ರಘುಪತಿ ಭಟ್ ಅವರಿಗೆ ಟಿಕೆಟ್ ಕೈತಪ್ಪಿತ್ತು. ಉಡುಪಿಯಿಂದ ಯಶಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಲಾಗುತ್ತು. ಇನ್ನೂ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ವಿಧಾನ ಪರಿಷತ್ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದ ರಘುಪತಿ ಭಟ್ ಈಗ ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದಾರೆ.